ತಮಿಳುನಾಡು, ಡಿ 25 ( DaijiworldNews/MS): ಒಂದೇ ಒಂದು ವಿವಾಹವಾಗಲು ಹೆಣಗಾಡುತ್ತಿರುವ ಯುವಕರ ನಡುವೆ ಇಲ್ಲೊಬ್ಬ ಕತರ್ನಾಕ್ ಕಿಲಾಡಿ 26 ನೇ ವಯಸ್ಸಿಗೆ 21 ಮದುವೆಯಾಗಿ ಇದೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ತಮಿಳುನಾಡು ರಾಜ್ಯದ ತಂಜಾವೂರು ಜಿಲ್ಲೆಯ ರಾಮನಪುಡಿ ಮೂಲದ ಕಾರ್ತಿಕ್ ರಾಜಾ 21 ವಿವಾಹವಾಗಿ ಹಲವರಿಗೆ ವಂಚನೆ ಎಸಗಿದ ಆರೋಪಿಯಾಗಿದ್ದಾನೆ.
ಸಿಕ್ಕಿಬಿದ್ದಿದ್ದು ಹೇಗೆ?
ಕಾರ್ತಿಕ್ ರಾಜಾ ಈ ವರ್ಷದ ಮಾರ್ಚ್ನಲ್ಲಿ ವಿರುಧುನಗರ ಜಿಲ್ಲೆ ಸತ್ತೂರು ಸಮೀಪದ ವಲ್ಲಂಪಟ್ಟಿ ಮೂಲದ ಜಾನ್ಸಿರಾಣಿ (20) ಎಂಬ ಯುವತಿಯನ್ನು 21ನೇ ವಿವಾಹವಾಗಿದ್ದ. ಮದುವೆಯಾಗಿ ಕೆಲ ಸಮಯದ ಬಳಿಕ ಪತ್ನಿಯ ಐದು ತೊಲ ಚಿನ್ನ ಹಾಗೂ ಒಂದೂವರೆ ಲಕ್ಷ ನಗದನ್ನು ವಿದೇಶದಲ್ಲಿ ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವನು ವಾಪಸ್ ಬಂದಿರಲಿಲ್ಲ. ಪತಿ ನಾಪತ್ತೆಯಾಗಿದ್ದು, ಪತ್ತೆ ಹಚ್ಚುವಂತೆ ಪತ್ನಿ ರಾಣಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಕಾರ್ತಿಕ್ ರಾಜಾ ಇರುವ ಸ್ಥಳವನ್ನು ಪತ್ತೆ ಹಚ್ಚಿದ್ದಾರೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 21 ಮದುವೆ ನಡೆದಿರುವುದು ಪೊಲೀಸರಿಗೆ ಕೇಳಿ ಶಾಕ್ ಆಗಿದೆ.
ಮದುವೆಯ ಸಮಯದಲ್ಲಿ ಪ್ರತಿ ಯುವತಿಗೂ ನಾನಾ ಹೆಸರಿನಲ್ಲಿ, ವಿವಿಧ ಉದ್ಯೋಗ ಮಾಡುತ್ತಿರುವುದಾಗಿ ನಂಬಿಸುತ್ತಿದ್ದ. ಐಷಾರಾಮಿ ಜೀವನ ನಡೆಸುತ್ತಿದ್ದ ಕಾರ್ತಿಕ್ ರಾಜ ಪ್ರತಿ ಹೆಂಡತಿಯೊಂದಿಗೆ ಐದು ಅಥವಾ ಆರು ತಿಂಗಳಿಗಿಂತ ಹೆಚ್ಚು ಕಾಲ ಕಳೆಯಲಿಲ್ಲ. ಆರು ತಿಂಗಳು ಕಳೆಯುತ್ತಿದ್ದಂತೆಯೇ ಬೇರೆ ಊರಿಗೆ ಹೋಗಿ ಅಲ್ಲಿ ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗುತ್ತಿದ್ದ ಕಾರ್ತಿಕ್ ರಾಜನಿಗೆ ಕೇವಲ 26 ವರ್ಷ.
ಈಗಾಗಲೇ 21 ಮದುವೆಗಳನ್ನು ಮಾಡಿಕೊಂಡಿರುವ ಈತನ ವಿರುದ್ದ ಆತನ ಪತ್ನಿಯರು ತಮಿಳುನಾಡು ರಾಜ್ಯದ ಕೊಯಮತ್ತೂರು, ಸತ್ತೂರು, ಎಜಯರಾಮಪ್ಪಣ್ಣೈ, ವಿಲ್ಲುಪುರಂ ಸೇರಿದಂತೆ 13 ಜಿಲ್ಲೆಗಳಲ್ಲಿ ಪೊಲೀಸ್ ದೂರುಗಳನ್ನು ದಾಖಲಿಸಿದ್ದಾರೆ. 21 ಮಹಿಳೆಯರಿಗೆ 80 ಪೌಂಡ್ ಚಿನ್ನಾಭರಣ ವಂಚಿಸಿರುವುದು ಬೆಳಕಿಗೆ ಬಂದಿದೆ. ಸದ್ಯ ಆತನಿಂದ ಆಡಿ ಖಾರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.