ಬೆಂಗಳೂರು, ಡಿ 25 ( DaijiworldNews/MS): ಬಿಜೆಪಿ ತೊರೆದು , ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿರುವ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ, "ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತವಾಗಿದ್ದು, ಗಂಗಾವತಿ ಕ್ಷೇತ್ರದಿಂದಲೇ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ಸುದೀರ್ಘ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು, '15 ದಿನದಲ್ಲಿ ನಮ್ಮ ಪಕ್ಷದ ಚಿಹ್ನೆ ಹಾಗೂ ಅದಕ್ಕೆ ಪೂರಕವಾಗುವ ವಿಚಾರಗಳ ಘೋಷಣೆ ಮಾಡಲಾಗುವುದು. ಹೊಸ ಪಕ್ಷ ಪ್ರಾರಂಭಿಸಿದಾಗ ಏನೆಲ್ಲ ಸವಾಲು ಎದುರಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡೇ ಬಿಜೆಪಿ ತೊರೆಯುತ್ತಿದ್ದೇನೆ. ನನಗೆ ಇನ್ನುಮುಂದೆ ಏನೇ ತೊಂದರೆ ಕೊಟ್ಟರೂ ಅದನ್ನು ಎದುರಿಸುತ್ತೇನೆ ಎಂದು ಹೇಳಿದ್ದಾರೆ.
ಇಡೀ ರಾಜ್ಯದಲ್ಲಿ ಪ್ರವಾಸ ಮಾಡಿ ನನ್ನ ಹೊಸ ಪಕ್ಷವನ್ನು ಬಲಪಡಿಸುತ್ತೇನೆ. ಈ ಹಿಂದೆ ಬಿಜೆಪಿಯಲ್ಲಿದ್ದಾಗ ಎಲ್ಲರನ್ನೂ ನನ್ನವರಂತೆ ಭಾವಿಸಿಕೊಂಡು ಇಷ್ಟು ದಿನ ಇದ್ದೆ. ಆದರೆ, ನಾನು ಯಾರನ್ನು ನಮ್ಮವರೆಂದು ನಂಬಿದ್ದೇನೋ ಅವರಿಂದಲೇ ಮೋಸ ಹೋಗಿದ್ದೇನೆ. ಹೀಗಾಗಿ, ನನಗೆ ಮೋಸ ಮಾಡಿದವರೇ ಮುಂದಿನ ನನ್ನ ಟಾರ್ಗೆಟ್ ಆಗಿದೆ ಎಂದು ಹೇಳಿದ್ದಾರೆ.
ಶ್ರೀರಾಮುಲು ಜತೆ ಸಹೋದರನ ಸಂಬಂಧವಿದೆ. ಸಚಿವನಾಗಿ ಅವರು ಈಗ ಒಳ್ಳೆಯ ಸ್ಥಾನದಲ್ಲಿದ್ದು ಆ ಪದವಿಬಿಟ್ಟು ನನ್ನ ಜತೆ ಬರುವಂತೆ ನಮ್ಮ ಸ್ನೇಹ ಗುರುಪಯೋಗಿಸಿ ಒತ್ತಡ ಹಾಕುವ ಕೆಲಸ ಮಾಡುವುದಿಲ್ಲ. ನನ್ನ ಸಹೋದರರಿಗೂ ಸ್ವಂತ ನಿರ್ಧಾರ ತೆಗೆದುಕೊಳ್ಳುವ ವಿವೇಚನೆಯಿದೆ. ಮುಂದೆ ನನ್ನ ಸಾಧನೆ ನೋಡಿ ಪಕ್ಷಕ್ಕೆ ಯಾರೇ ಬಂದರೂ ಸ್ವಾಗತಿಸುವೆ ಎಂದು ರೆಡ್ಡಿ ತಿಳಿಸಿದ್ದಾರೆ.