ಬೆಂಗಳೂರು, ಡಿ 25 ( DaijiworldNews/MS): ಮಾಜಿ ಸಚಿವ ಜನಾರ್ಧನ ರೆಡ್ಡಿ ಕೊನೆಗೂ ಬಿಜೆಪಿಗೆ ಗುಡ್ಬೈ ಹೇಳುವ ಮೂಲಕ ರಾಜ್ಯ ರಾಜಕೀಯದಲ್ಲಿಯೂ ಸಂಚಲನ ಮೂಡಿಸಿದ್ದಾರೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಹೊಸದೊಂದು ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ. ತಮ್ಮ ನೂತನ ಪಕ್ಷಕ್ಕೆ "ಕಲ್ಯಾಣ ರಾಜ್ಯ ಪ್ರಗತಿ ಪಕ್ಷ " ಎಂದು ಹೆಸರಿಟ್ಟಿದ್ದು , ಈವರೆಗೆ ಬಿಜೆಪಿ ಪಕ್ಷದೊಂದಿಗೆ ಇದ್ದ ಎಲ್ಲಾ ನಂಟು ತೊರೆಯುವುದಾಗಿ ಹೇಳಿ ಹಲವು ದಿನಗಳ ಊಹಾಪೋಹಗಳಿಗೆ ಅವರು ಬೆಂಗಳೂರಿನಲ್ಲಿ ಇಂದು ಪತ್ರಿಕಾಗೋಷ್ಟಿ ನಡೆಸಿ ತೆರೆ ಎಳೆದಿದ್ದಾರೆ.
ಸುದೀರ್ಘ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಇಡೀ ತಮ್ಮ ಎರಡು ದಶಕದ ರಾಜಕೀಯ ಜೀವನದ ಆಗು-ಹೋಗುಗಳ ಬಗ್ಗೆ ವಿವರಿಸಿದ್ದಾರೆ. ಆ ಮೂಲಕ, ಬಿಜೆಪಿ ತಮ್ಮನ್ನು ಕೆಲವು ವರ್ಷಗಳಿಂದ ನಡೆಸಿಕೊಂಡಿರುವುದಕ್ಕೆ ಬೇಸತ್ತು ಬಿಜೆಪಿಯಿಂದ ಹೊರಬಂದು 'ಕಲ್ಯಾಣ ರಾಜ್ಯ ಪ್ರಗತಿ ಪಕ್ಷ'ವನ್ನು ಕಟ್ಟಿದ್ದೇನೆ. ಆ ಮೂಲಕ ಹೊಸ ಪಕ್ಷದ ಉದಯ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
ಕರ್ನಾಟಕ ರಾಜ್ಯದ ಅಭಿವೃದ್ದಿಯೇ ನನ್ನ ಗುರಿಯಾಗಿದ್ದು, ಜನ ಮೆಚ್ಚುವ ರೀತಿಯಲ್ಲಿ ನನ್ನ ಪಕ್ಷ ಕೆಲಸ ಮಾಡುತ್ತದೆ ಎಂದು ಇದೇ ವೇಳೆ ಭರವಸೆ ನೀಡಿದ್ದಾರೆ