ತುಮಕೂರು, ಡಿ 24 (DaijiworldNews/HR): ಸರ್ಕಾರ ಐದು ಮತ್ತು ಎಂಟನೇ ತರಗತಿ ಮಕ್ಕಳ ಪರೀಕ್ಷೆ ಮೌಲ್ಯಮಾಪನ ಕುರಿತಂತೆ ಹೊರಡಿಸಿರುವ ಸುತ್ತೋಲೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ತಪ್ಪಾಗಿ ಆರ್ಥೈಸಿಕೊಂಡಿದ್ದು, ಅದು ಪಬ್ಲಿಕ್ ಪರೀಕ್ಷೆಯಲ್ಲ, ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ವಿದ್ಯಾರ್ಥಿಗಳ ಕಲಿಕೆಯನ್ನು ಮೌಲ್ಯ ಮಾಪನ ಮಾಡುವುದಷ್ಟೇ ಕೆಲಸವನ್ನು ಮಾಡಲಿದೆ. ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವುದಿಲ್ಲ ಎಂದರು.
ಇನ್ನು ಕೆಳ ಹಂತದಲ್ಲಿ ಮಕ್ಕಳಿಗೆ ಏನು ಕಲಿಸಿಲ್ಲ ಎಂಬ ದೂರುಗಳು ಬರುತ್ತಿವೆ. ಅಲ್ಲದೇ ಡ್ರಾಪ್ಔಟ್ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಲ್ಲಿ ಆತ್ಮಸ್ಥರ್ಯ ತುಂಬುವ ನಿಟ್ಟಿನಲ್ಲಿ ಮಗುವಿನ ತಿಳಿವಳಿಕೆಯನ್ನು ಮೌಲ್ಯಮಾಪನ ಮಾಡಲಾಗುತ್ತಿದೆ. ಇದರಿಂದ ಮುಂದಿನ ತರಗತಿಯಲ್ಲಿ ಆತ ತನ್ನ ಪಕ್ಕದಲ್ಲಿ ಕುಳಿತವನಿಗಿಂತ ನಾನು ಕಲಿಕೆಯಲ್ಲಿ ಹಿಂದೆ ಎಂಬ ಕೀಳರಿಮೆ ಬಾರದಂತೆ ನೋಡಿಕೊಳ್ಳುವುದೇ ಇದರ ಉದ್ದೇಶ ಎಂದು ತಿಳಿಸಿದ್ದಾರೆ.