ಸಾರಂಗಪುರ, ಡಿ 24 (DaijiworldNews/DB): ಅದೃಷ್ಟ ಯಾವಾಗ ಯಾವ ರೂಪದಲ್ಲಿ ಮನುಷ್ಯನ ಕೈ ಹಿಡಿಯುತ್ತದೆ ಎನ್ನುವುದಕ್ಕಾಗುವುದಿಲ್ಲ. ಜೀವನ ನಿರ್ವಹಣೆಗಾಗಿ ಉದ್ಯೋಗ ಅರಸಿ ದುಬೈಗೆ ತೆರಳಿ ಚಾಲಕನಾಗಿ ದುಡಿಯುತ್ತಿದ್ದ ತೆಲಂಗಾಣದ ಯುವಕನೊಬ್ಬ ಇದೀಗ 33 ಕೋಟಿ ರೂ.ಗಳ ಒಡೆಯನಾಗಿದ್ದಾನೆ!
ತೆಲಂಗಾಣದ ಜಗಿತ್ಯಾಲ ಜಿಲ್ಲೆಯ ಬೀರ್ಪುರ ಮಂಡಲ ತುಂಗೂರ್ ಗ್ರಾಮದ ಯುವಕ ಅಜಯ್ ಒಗುಲ ಅವರೇ 33 ಕೋಟಿ ರೂ.ಗಳ ಒಡೆಯರಾದವರು. ದುಬೈಯಲ್ಲಿ ಲಾಟರಿ ಖರೀದಿಸಿದ್ದರೂ ಅಜಯ್ ಕೋಟಿಯ ಕನಸೇ ಕಂಡಿರಲಿಲ್ಲ. ಆದರೆ ಕೋಟಿ ಹಣ ಮಾತ್ರ ಅವರ ಕೈ ಹಿಡಿದಿದೆ. ದುಬೈ ಎಮಿರೇಟ್ಸ್ ನ ಈಸಿ ಗ್ರಾಂಡ್ ಪ್ರೈಜ್ ಲಾಟರಿಯಲ್ಲಿ 15 ಮಿಲಿಯನ್ (ಸುಮಾರು 33 ಕೋಟಿ ರೂ.) ಹಣ ಅಜಯ್ ಪಾಲಾಗಿದೆ.
ಒಗುಲ ದೇವರಾಜಂ-ಪ್ರಮೀಳ ದಂಪತಿಯ ಪುತ್ರ ಅಜಯ್ ತಂದೆ ದೇವರಾಜಂ ನಿಧನಾನಂತರ ಉದ್ಯೋಗ ಅರಸಿ ದುಬೈಗೆ ತೆರಳಿದ್ದರು. ಅಲ್ಲಿನ ಆಭರಣ ಕಂಪೆನಿಯೊಂದರಲ್ಲಿ ಚಾಲಕನಾಗಿ ದುಡಿಯುತ್ತಿದ್ದರು. ಇತ್ತೀಚೆಗೆ ತಲಾ 15 ರೂ. ನೀಡಿ ಎರಡು ಲಾಟರಿ ಟಿಕೆಟ್ಗಳನ್ನು ಖರೀದಿಸಿದ್ದರು. ಡಿಸೆಂಬರ್ 16ರಂದು ಲಾಟರಿ ಡ್ರಾ ಆಗಿದ್ದಾಗ ಅಜಯ್ಗೆ ಬಹುಮಾನ ಬಂದಿರುವುದು ನೋಡಿ ಅವರಿಗೆ ಆಶ್ಚರ್ಯ ಮತ್ತು ಸಂತೋಷ ಜೊತೆಗೇ ಆಗಿದೆ.
ಇನ್ನು ಲಾಟರಿ ಬಂದಿರುವ ಕುರಿತು ಮಾಧ್ಯಮಗಳೊಂದಿಗೆ ಖುಷಿ ಹಂಚಿಕೊಂಡಿರುವ ಅಜಯ್, 15 ಮಿಲಿಯನ್ ಲಾಟರಿ ಗೆದ್ದಿದ್ದೇನೆ. ಭಾರತೀಯ ಕರೆನ್ಸಿಯಲ್ಲಿ ಇದರ ಮೌಲ್ಯ ಸುಮಾರು 33 ಕೋಟಿ ರೂ. ಆಗುತ್ತದೆ. ತೆರಿಗೆ ಕಡಿತವಾಗಿ 30 ಕೋಟಿ ರೂಪಾಯಿ ಹಣ ನನ್ನ ಕೈಸೇರಲಿದೆ ಎಂದಿದ್ದಾರೆ.