ರಾಜ್ಕೋಟ್, ಡಿ 24 (DaijiworldNews/DB): ಭವಿಷ್ಯದ ಶಿಕ್ಷಣ ವ್ಯವಸ್ಥೆಯನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ರೂಪಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್ಕೋಟ್ನಲ್ಲಿ ಶ್ರೀ ಸ್ವಾಮಿ ನಾರಾಯಣ ಗುರುಕುಲದ 75ನೇ 'ಅಮೃತ್ ಮಹೋತ್ಸವ'ವನ್ನು ಉದ್ದೇಶಿಸಿ ಶನಿವಾರ ಮಾತನಾಡಿದ ಅವರು, ಎನ್ಇಪಿ ಮೂಲಕ ಶಿಕ್ಷಣ ವ್ಯವಸ್ಥೆಯನ್ನು ಉತ್ತಮಗೊಳಿಸಲಾಗುವುದು. ಮೊದಲ ಬಾರಿಗೆ ದೂರದೃಷ್ಟಿಯ ಮತ್ತು ಭವಿಷ್ಯದ ಶಿಕ್ಷಣ ವ್ಯವಸ್ಥೆ ಸಿದ್ದಪಡಿಸುವ ಕೆಲಸದಲ್ಲಿ ಸರ್ಕಾರ ತೊಡಗಿದೆ ಎಂದರು.
ಐಐಟಿ, ಐಐಎಂ ಮತ್ತು ವೈದ್ಯಕೀಯ ಕಾಲೇಜುಗಳ ಸಂಖ್ಯೆ 2014ರ ಬಳಿಕ ಹೆಚ್ಚಾಗಿದೆ. ಶೇ. 65ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳು ಸ್ಥಾಪನೆಯಾಗಿವೆ. ಇದು ನಮ್ಮ ಸರ್ಕಾರದ ಸಾಧನೆಯಾಗಿದೆ. ಶಿಕ್ಷಣಕ್ಕೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಮಹತ್ತರವಾಗಿದೆ ಎಂದು ತಿಳಿಸಿದರು.
ಅಸ್ತಿತ್ವದಲ್ಲಿರುವ ಶಿಕ್ಷಣ ನೀತಿ ಮತ್ತು ಸಂಸ್ಥೆಗಳು ಭಾರತದ ಭವಿಷ್ಯ ನಿರ್ಮಾಣದಲ್ಲಿ ದೊಡ್ಡ ಪಾತ್ರ ವಹಿಸುತ್ತವೆ. ಶಿಕ್ಷಣ ನೀತಿ, ಶೈಕ್ಷಣಿಕ ಕ್ಷೇತ್ರದ ಮೂಲ ಸೌಕರ್ಯ ಹೆಚ್ಚಳ ಮತ್ತು ಈ ರಂಗದಲ್ಲಿನ ವೇಗ ಸಂಬಂಧಿಸಿ ಸರ್ಕಾರ ಆದ್ಯ ಒತ್ತು ನೀಡಲಿದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.