ನವದೆಹಲಿ, ಡಿ 24 (DaijiworldNews/HR): ಪ್ರತಿ ರಾಜ್ಯದಲ್ಲೂ ಲಕ್ಷಾಂತರ ಜನರು ಯಾತ್ರೆಗೆ ಸೇರಿದ್ದಾರೆ. ನಿಮ್ಮ ದ್ವೇಷದ ಬಜಾರ್ನಲ್ಲಿ ಪ್ರೀತಿಯ ಅಂಗಡಿ ತೆರೆಯಲು ನಾವು ಇಲ್ಲಿದ್ದೇವೆ ಎಂದು ನಾನು ಆರ್ಎಸ್ಎಸ್ ಮತ್ತು ಬಿಜೆಪಿಯ ಜನರಿಗೆ ಹೇಳಿದ್ದೇನೆ ಎಂಬುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆಗೆ ದೆಹಲಿಯಲ್ಲಿ ಕಾರ್ಯಕರ್ತರ ದಂಡೇ ಸೇರಿದ್ದು, ಈ ವೇಳೆ ಮಾತನಾಡಿದ ಅವರು, 'ನಫ್ರತ್ ಕಾ ಬಜಾರ್' (ದ್ವೇಷದ ಮಾರುಕಟ್ಟೆ) ನಡುವೆ 'ಮೊಹಬ್ಬತ್ ಕಿ ದುಕಾನ್' (ಪ್ರೀತಿಯ ಅಂಗಡಿ) ತೆರೆಯುವುದು ತಮ್ಮ ಯಾತ್ರೆಯ ಉದ್ದೇಶವಾಗಿದೆ ಎಂದರು.
ಇನ್ನು ಇಂದು ಮುಂಜಾನೆ ಭಾರತ್ ಜೋಡೋ ಯಾತ್ರೆಯು ಫರಿದಾಬಾದ್ ನಿಂದ ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುತ್ತಿದ್ದಂತೆ, ದೆಹಲಿ ಕಾಂಗ್ರೆಸ್ ಮುಖ್ಯಸ್ಥ ಅನಿಲ್ ಚೌಧರಿ ಅವರು 'ರಾಹುಲ್ ಜಿಂದಾಬಾದ್' ಘೋಷಣೆಗಳ ನಡುವೆ ಬದರ್ಪುರ ಗಡಿಯಲ್ಲಿ ರಾಹುಲ್ ಗಾಂಧಿ, ಇತರ ಪಕ್ಷದ ನಾಯಕರು ಮತ್ತು ಯಾತ್ರಿಗಳನ್ನು ಸ್ವಾಗತಿಸಿದರು.