ನವದೆಹಲಿ, ಡಿ 24 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರ ಉಡುಗೆಯನ್ನು ಟೀಕಿಸಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಟಿಎಂಸಿ ನಾಯಕ ಕೀರ್ತಿ ಆಜಾದ್ ಇದೀಗ ಕ್ಷಮೆ ಕೇಳಿದ್ದಾರೆ. ನನ್ನ ಮಾತುಗಳಿಂದ ಹಲವರ ಭಾವನೆಗಳಿಗೆ ಧಕ್ಕೆಯಾಗಿದ್ದು, ಅದಕ್ಕಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೀರ್ತಿ ಆಜಾದ್, ದೇಶದ ಸಂಸ್ಕೃತಿ, ಪರಂಪರೆ ಬಗ್ಗೆ ನನಗೆ ಗೌರವವಿದೆ. ಯಾರನ್ನೂ ನೋಯಿಸುವ ಉದ್ದೇಶದಿಂದ ನಾನು ಪ್ರಧಾನಿ ಧಿರಿಸಿನ ಬಗ್ಗೆ ಕಾಮೆಂಟ್ ಮಾಡಿಲ್ಲ. ನನ್ನ ಮಾತುಗಳಿಂದ ಹಲವರಿಗೆ ನೋವಾಗಿದ್ದು, ಇದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ನಮ್ಮ ದೇಶದ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಕೆಲಸವನ್ನು ಸದಾ ಮಾಡುತ್ತೇನೆ ಎಂದು ಹೇಳಿದ್ದಾರೆ.
ಫ್ಯಾಶನ್ ಬಟ್ಟೆ ತೊಡುವುದರಲ್ಲಿ ನಮ್ಮ ಪ್ರಧಾನಿಗಳಿಗೆ ಹೆಚ್ಚು ಆಸಕ್ತಿ ಎಂದು ಹೇಳುವುದು ನನ್ನ ಉದ್ದೇಶವಾಗಿತ್ತು ಎಂದು ಈ ಹಿಂದೆ ಟ್ವೀಟ್ ಮಾಡಿ ಹೇಳಿದ್ದ ಕೀರ್ತಿ ಆಜಾದ್, ಇದೀಗ ಹಲವು ಆಕ್ರೋಶ ಮತ್ತು ಸ್ವಪಕ್ಷದಿಂದಲೇ ವಿರೋಧ ವ್ಯಕ್ತವಾದ ಬಳಿಕ ಕ್ಷಮೆ ಕೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಮೇಘಾಲಯಕ್ಕೆ ಭೇಟಿ ನೀಡಿದ್ದಾಗ ಧರಿಸಿದ್ದ ನೀಲಿ ಬಣ್ಣದ ಖಾಸಿ ಉಡುಪನ್ನು ಕೊಲ್ಯಾಜ್ ಫೋಟೋ ಜೊತೆಗೆ ಹಂಚಿಕೊಂಡು ಇದು ಗಂಡಸರ ಉಡುಪೂ ಅಲ್ಲ, ಮಹಿಳೆಯರ ಉಡುಪೂ ಅಲ್ಲ, ಕೇವಲ ಮೋದಿಯವರ ಫ್ಯಾಶನ್ ಎಂದು ಬರೆದಿದ್ದರು. ಕೀರ್ತಿಯವರ ಈ ಪೋಸ್ಟ್ಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಯಾವುದೇ ಸ್ಥಳಕ್ಕೆ ಪ್ರಧಾನಿ ಭೇಟಿ ಕೊಟ್ಟಾಗ ಆ ಸ್ಥಳದ ಸಂಸ್ಕೃತಿ ಪ್ರತಿನಿಧಿಸುವ ಸಾಂಪ್ರದಾಯಿಕ ಉಡುಪು, ಟೋಪಿಯನ್ನು ಧರಿಸುವುದು ಸಾಮಾನ್ಯ ಎಂದು ಬಿಜೆಪಿ ಹೇಳಿತ್ತು. ಕೀರ್ತಿ ಅವರ ಟೀಕೆಯನ್ನು ಸ್ವಪಕ್ಷ ಟಿಎಂಸಿ ಕೂಡಾ ವಿರೋಧಿಸಿತ್ತು.