ಕಾನ್ಪುರ, ಡಿ 24 (DaijiworldNews/DB): ಸುರಂಗ ಕೊರೆದು ಎಸ್ಬಿಐ ಶಾಖೆಯೊಂದಕ್ಕೆ ಕನ್ನ ಹಾಕಿದ ಖದೀಮರು ಶಾಖೆಯಿಂದ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ ಲಪಟಾಯಿಸಿದ ಘಟನೆ ಕಾನ್ಪುರದಲ್ಲಿ ನಡೆದಿದೆ.
ಕಾನ್ಪುರದ ಸಚೇಂದಿಯಲ್ಲಿರುವ ಎಸ್ಬಿಐ ಶಾಖೆಯಲ್ಲಿ ಶುಕ್ರವಾರ ಘಟನೆ ನಡೆದಿದೆ. ದರೋಡೆಕೋರರು ಶಾಖೆಗೆ ಸುರಂಗ ಕೊರೆದು ಬಳಿಕ 1 ಕೋಟಿ ರೂ. ಮೌಲ್ಯದ 1.8 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇನ್ನು ಲಾಕರ್ ತೆರೆಯಲು ಕಳ್ಳರು ಗ್ಯಾಸ್ ಕಟ್ಟರ್ ಬಳಸಿದ್ದು, ಶಾಖೆಯಲ್ಲಿದ್ದ ಅಲಾರಂ ವ್ಯವಸ್ಥೆಯನ್ನು ನಿಷ್ಕ್ರಿಯಗೊಳಿಸಿದ್ದಾರೆ. ಅಲ್ಲದೆ ಸ್ಟ್ರಾಂಗ್ ರೂಂನಲ್ಲಿದ್ದ ಸಿಸಿಟಿವಿ ಕ್ಯಾಮರಾವನ್ನು ಬೇರೆಡೆಗೆ ತಿರುಗಿಸಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.