ನವದೆಹಲಿ,ಡಿ 24 ( DaijiworldNews/MS): ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಹೊರಟಿರುವ ಭಾರತ್ ಜೋಡೊ ಯಾತ್ರೆಯು ಶನಿವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿ ದೆಹಲಿ ಪ್ರವೇಶಿಸಿತು.
ಹರಿಯಾಣದ ಫರಿದಾಬಾದ್ನಿಂದ ಯಾತ್ರೆಯು ಬರದಾಪುರ್ (ಮೆಟ್ರೊ ನಿಲ್ದಾಣದ ಸಮೀಪ) ಮೂಲಕ ದೆಹಲಿ ತಲುಪಿತು. ಸೆಪ್ಟೆಂಬರ್ 7 ರಂದು ಪ್ರಾರಂಭವಾದ ಯಾತ್ರೆಯು 107 ದಿನ ಪೂರೈಸಿದ್ದು , ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹಾದುಹೋಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯ ಪ್ರವೇಶ ಪಡೆಯುತ್ತಿದ್ದಂತೆಯೇ ಭಾರತ್ ಜೋಡೊ ಯಾತ್ರೆಯನ್ನು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌದರಿ ನೇತೃತ್ವದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಕಾಂಗ್ರೆಸ್ ನಾಯಕರಾದ ಭೂಪಿಂದರ್ ಸಿಂಗ್ ಹೂಡಾ, ಕುಮಾರಿ ಸೆಲ್ಜಾ, ಶಶಿಕಾಂತ್ ಗೋಹಿಲ್, ರಣದೀಪ್ ಸುರ್ಜೇವಾಲಾ ರಾಹುಲ್ ಗಾಂಧಿ ಅವರಿಗೆ ಸಾಥ್ ಕೊಟ್ಟರು.
ಯಾತ್ರೆಯೂ ನಿಜಾಮುದ್ದಿನ್, ಇಂಡಿಯಾ ಗೇಟ್ ಸರ್ಕಲ್, ಐಟಿಒ, ದೆಹಲಿ ಕೌಂಟ್, ದರಿಯಾಗಂಜ್ ನಂತರ ಕೆಂಪು ಕೋಟೆಯತ್ತ ಸಾಗಲಿದ್ದು, ಹೊಸ ವರ್ಷದ ಪ್ರಯುಕ್ತ ಯಾತ್ರೆಗೆ 9 ದಿನ ವಿಶ್ರಾಂತಿ ನೀಡಲಾಗಿದ್ದು ಜನವರಿ 3ರಿಂದ ಪುನಃ ಪ್ರಾರಂಭವಾಗಲಿದೆ.