ನವದೆಹಲಿ, ಡಿ 23 (DaijiworldNews/DB): ಲಿವ್ ಇನ್ ಸಂಗಾತಿ ಶ್ರದ್ದಾ ವಾಕರ್ನನ್ನು ಹತ್ಯೆ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿರುವ ಆರೋಪಿ ಅಫ್ತಾಬ್ ಅಮೀನ್ ಪೂನಾವಾಲನ ನ್ಯಾಯಾಂಗ ಬಂಧನದ ಅವಧಿಯನ್ನು ಮತ್ತೆ 14 ದಿನಗಳ ಕಾಲ ವಿಸ್ತರಿಸಿ ದೆಹಲಿ ನ್ಯಾಯಾಲಯ ಆದೇಶಿಸಿದೆ.
ಆರೋಪಿಯ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ನ್ಯಾಯಾಧೀಶೆ ವಿಜಯಶ್ರಿ ರಾಥೋಡ್ ವಿಡಿಯೊ ಕಾನ್ಫರೆನ್ಸ್ ಮೂಲಕ ಅರ್ಜಿ ವಿಚಾರಣೆ ನಡೆಸಿದರು. ಬಳಿಕ ಜನವರಿ 6ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಆದೇಶಿಸಿದರು.
ದೆಹಲಿಯ ಶ್ರದ್ಧಾ ವಾಕರ್ ಹತ್ಯೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಈಕೆಯನ್ನು ಲಿವ್ ಇನ್ ಸಂಗಾತಿ ಅಫ್ತಾಬ್ ಅಮೀನ್ ಪೂನಾವಾಲ ಹತ್ಯೆಗೈದು ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದೆಹಲಿಯ ವಿವಿಧೆಡೆ ಎಸೆದಿದ್ದ. ಘಟನೆ ನಡೆದು ಹಲವು ತಿಂಗಳುಗಳ ಬಳಿಕ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಆದರೆ, ಘಟನೆ ಸಂಬಂಧ ಪ್ರಮುಖ ಸಾಕ್ಷ್ಯ ಕಂಡು ಬಾರದ ಹಿನ್ನೆಲೆಯಲ್ಲಿ ಆತನ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಲಾಗಿದೆ.
ಶ್ರದ್ದಾಳ ಮೊಬೈಲ್, ಹತ್ಯೆಗೆ ಬಳಸಿದ್ದ ಆಯುಧಗಳು ಇನ್ನೂ ಪೊಲೀಸರಿಗೆ ಲಭಿಸಿಲ್ಲ. ಆದರೆ ಆಕೆಯ ದೇಹದ್ದೇ ಎನ್ನಲಾದ ಕೆಲವು ಭಾಗಗಳು ಪೊಲೀಸರಿಗೆ ಸಿಕ್ಕಿದ್ದು, ಅದರ ಡಿಎನ್ಎ ಪರೀಕ್ಷೆಯ ಫಲಿತಾಂಶ ಇನ್ನಷ್ಟೆ ಲಭಿಸಬೇಕಿದೆ. ಹೀಗಾಗಿ ಹತ್ಯೆಯನ್ನು ಸಾಬೀತುಪಡಿಸಲು ಈ ಸಾಕ್ಷ್ಯಗಳು ಪೊಲೀಸರಿಗೆ ಸಿಗಬೇಕಿದೆ ಎಂದು ತಿಳಿದು ಬಂದಿದೆ.