ನವದೆಹಲಿ, ಡಿ 23 (DaijiworldNews/DB): ಭಾರತದಲ್ಲಿ ದ್ವೇಷ ಹೆಚ್ಚಿದೆ. ಆದರೆ ಇದಕ್ಕೆ ದೇಶ ಬಿಟ್ಟು ಹೋಗುವುದು ಪರಿಹಾರವಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.
ಭಾರತದಲ್ಲಿ ದ್ವೇಷ ಹೆಚ್ಚಿರುವುದರಿಂದ ಮಕ್ಕಳನ್ನು ವಿದೇಶದಲ್ಲೇ ನೆಲೆಸಲು ಹೇಳಿದ್ದೇನೆ ಎಂಬ ಆರ್ಜೆಡಿ ನಾಯಕ ಎಬಿ ಸಿದ್ದಿಕಿ ಹೇಳಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ದೇಶದಲ್ಲಿ ದ್ವೇಷ ಹೆಚ್ಚಿದೆ. ಆದರೆ ಇದನ್ನು ಮುಗಿಸಬೇಕು. ಎಲ್ಲಾ ಧರ್ಮದವರೂ ಸಹೋದರತ್ವದಿಂದ ಬಾಳಬೇಕು. ಒಗ್ಗಟ್ಟಾಗಿದ್ದರೆ ಯಾವ ದ್ವೇಷವೂ ಬೆಳೆಯುವುದಿಲ್ಲ ಎಂದರು.
ಶಾರುಖ್ ಖಾನ್ ಅವರ ಪಠಾಣ್ ಚಿತ್ರದಲ್ಲಿ ಧರಿಸಿದ ಕೇಸರಿ ಬಣ್ಣದ ಬಟ್ಟೆಯು ವಿವಾದಕ್ಕೀಡಾಗಿದೆ. ಕೇಸರಿ ಹಿಂದೂಗಳಿಗೆ, ಹಸಿರು ಮುಸ್ಲಿಮರಿಗೆ ಎಂದು ವರ್ಗೀಕರಿಸುವುದು ಸರಿಯಲ್ಲ. ಹಸು ಹಿಂದೂಗಳಿಗೆ, ಎತ್ತು ಮುಸ್ಲಿಮರಿಗೆ ಎಂದರ್ಥವೇ ಎಂದವರು ಇದೇ ವೇಳೆ ಪ್ರಶ್ನಿಸಿದರು.
ಆರ್ಟಿಕಲ್ 370 ರದ್ದುಗೊಳಿಸುವುದರಿಂದ ಭಯೋತ್ಪಾದನೆಗೆ ಅಂತ್ಯ ಹಾಡಿದಂತೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಕಾಶ್ಮೀರದಲ್ಲಿ ಭಯೋತ್ಪಾದನೆ ನಿಂತಿದೆಯೇ? ಕೇಂದ್ರ ಸರ್ಕಾರ ಈ ಬಗ್ಗೆ ಉತ್ತರಿಸಬೇಕು ಎಂದರು.