ನವದೆಹಲಿ, ಡಿ 23 (DaijiworldNews/DB): ಈಶಾನ್ಯ ದೆಹಲಿ ಗಲಭೆ ಪ್ರಕರಣ ಸಂಬಂಧಿಸಿ ಬಂಧಿತನಾಗಿರುವ ಜೆಎನ್ಯು ವಿದ್ಯಾರ್ಥಿಯಾಗಿದ್ದ ಉಮರ್ ಖಾಲಿದ್ ಅವರನ್ನು ಮಧ್ಯಂತರ ಜಾಮೀನು ಮೇಲೆ ಜೈಲ್ನಿಂದ ಬಿಡುಗಡೆಗೊಳಿಸಲಾಗಿದೆ. ಸಹೋದರಿಯ ಮದುವೆ ಹಿನ್ನೆಲೆಯಲ್ಲಿ ಒಂದು ವಾರ ಕಾಲ ಅವರನ್ನು ಬಿಡುಗಡೆ ಮಾಡಲಾಗಿದೆ.
ಸದ್ಯ ಉಮರ್ ಖಾಲಿದ್ ತಿಹಾರ್ ಜೈಲ್ನಲ್ಲಿದ್ದು, ಎರಡು ವಾರದ ಅವಧಿಗೆ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಅಮಿತಾಬ್ ರಾವತ್ ಅವರು ಡಿಸೆಂಬರ್ 30ರವರೆಗೆ ಒಂದು ವಾರ ಕಾಲ ಮಧ್ಯಂತರ ಜಾಮೀನು ನೀಡಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ವಿರೋಧಿಸಿ 2020ರಲ್ಲಿ ದೆಹಲಿಯ ಈಶಾನ್ಯ ಭಾಗದಲ್ಲಿ ನಡೆದಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ 53 ಮಂದಿಯ ಸಾವಿಗೆ ಕಾರಣವಾಗಿತ್ತು. ಘಟನೆಯಲ್ಲಿ 700ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಗಲಭೆಗೆ ಉಮರ್ ಖಾಲಿದ್ ಕಾರಣ ಎಂಬ ಆರೋಪದಡಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.