ನವದೆಹಲಿ, ಡಿ 23 ( DaijiworldNews/MS): ದೇಶದ ಬಡ ಜನರಿಗೆ ಪ್ರತಿ ತಿಂಗಳು ಉಚಿತ ಪಡಿತರ ನೀಡುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯ ಗಡುವು ಡಿಸೆಂಬರ್ 31 ಕ್ಕೆ ಕೊನೆಗೊಳ್ಳಲಿದ್ದು, ಇದು ವಿಸ್ತರಣೆಯಾಗುವುದು ಸಾಧ್ಯತೆ ಬಹುತೇಕವಿದೆ.
ಈ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಕಾರಾತ್ಮಕ ಸೂಚನೆ ನೀಡಿದ್ದು, ಡಿಸೆಂಬರ್ ನಂತರವೂ ಬಡವರಿಗೆ ಉಚಿತ ಪಡಿತರ ನೀಡಲು ಪಿಎಂಜಿಕೆಎವೈ ಯೋಜನೆಯನ್ನು ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಯೋಜನೆಯಡಿ 80 ಕೋಟಿ ಬಡವರಿಗೆ ತಿಂಗಳಿಗೆ 5 ಕೆಜಿ ಗೋಧಿ ಮತ್ತು ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿದ್ದು, ಕೊರೊನಾ ಲಾಕ್ಡೌನ್ ಸಮಯದಲ್ಲಿ ಬಡವರಿಗೆ ಈ ಯೋಜನೆ ಬಹಳ ಉಪಯುಕ್ತವಾಗಿತ್ತು. ಹೀಗಾಗಿ ಶುಕ್ರವಾರ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಂಪುಟ ಸಭೆಯಲ್ಲಿ ಯೋಜನೆ ಕುರಿತು ನಿರ್ಧಾರ ಕೈಗೊಳ್ಳಬಹುದು. ಕೊರೊನಾ ಮತ್ತೆ ಹೆಚ್ಚಾಗುವ ಲಕ್ಷಣಗಳ ಹಿನ್ನೆಲೆಯಲ್ಲಿ, ಈ ಯೋಜನೆಯನ್ನು ಹೆಚ್ಚಿಸುವ ಬಲವಾದ ಸಾಧ್ಯತೆಯಿದೆ ಎಂದು ನಂಬಲಾಗಿದೆ.