ಹುಬ್ಬಳ್ಳಿ, ಡಿ 23 (DaijiworldNews/DB): ಸರ್ಕಾರಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕನಿಂದ ಗಂಭೀರ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಿಕ್ಷಕಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಗದಗದಲ್ಲಿ ನಡೆದಿದೆ. ಹಲ್ಲೆಯಿಂದಾಗಿ ಕೆಲವು ದಿನಗಳ ಹಿಂದೆಯೇ ಶಿಕ್ಷಕಿಯ ಮಗ ಸಾವನ್ನಪ್ಪಿದ್ದು, ಆ ಮೂಲಕ ತ್ರಿಕೋನ ಪ್ರೇಮಕತೆಯೊಂದರ ಕಾರಣದಿಂದಾಗಿ ಎರಡು ಜೀವಗಳು ಬಲಿಯಾದಂತಾಗಿವೆ.
ಶಿಕ್ಷಕಿ ಗೀತಾ ಬಾರಕೇರ ಮೃತಪಟ್ಟವರು. ಆರೋಪಿ ಶಿಕ್ಷಕ ಮುತ್ತಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 19ರಂದು ಗದಗ ಜಿಲ್ಲೆಯ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕ ಶಿಕ್ಷಕಿ ಮೇಲೆ ಸಲಾಕೆಯಿಂದ ಗಂಭೀರ ನಡೆಸಿದ್ದು, ಶಿಕ್ಷಕಿ ಗೀತಾ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು. ಅವರ 10 ವರ್ಷದ ಮಗು ಭರತ್ ಸ್ಥಳದಲ್ಲೇ ಸಾವನ್ನಪ್ಪಿದ್ದ.
ಏನಿದು ಘಟನೆ?
ಶಿಕ್ಷಕಿ ಗೀತಾ ಕರ್ತವ್ಯ ನಿರ್ವಹಿಸುತ್ತಿದ್ದ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮುತ್ತಪ್ಪ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ಪ್ರೇಮಾಂಕುರವಾಗಿ ಸಲುಗೆಯಿಂದ ಇದ್ದರಲ್ಲದೆ ಮೆಸೇಜ್, ಫೋನ್ ಮಾತುಕತೆಯೂ ನಡೆಯುತ್ತಿತ್ತು. ಆದರೆ ಕೆಲ ದಿನಗಳ ಹಿಂದೆ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಹೋಗಿದ್ದ ವೇಳೆ ಶಿಕ್ಷಕಿ ಗೀತಾ ಸಹ ಶಿಕ್ಷಕ ಸಂಗನ ಗೌಡ ಎಂಬವರೊಂದಿಗೆ ಸಲುಗೆಯಿಂದ ಇರುವುದನ್ನು ನೋಡಿ ಮುತ್ತಪ್ಪ ಸಹಿಸದಾಗಿದ್ದ. ಹೀಗಾಗಿ ಪ್ರವಾಸದಿಂದ ಹಿಂತಿರುಗಿದ ಕೂಡಲೇ ಕುಪಿತಗೊಂಡ ಮುತ್ತಪ್ಪ ಶಿಕ್ಷಕಿ ಗೀತಾಳ ಮಗ ಭರತನಿಗೆ ಶಾಲೆಯಲ್ಲಿ ಗಂಭೀರ ಹಲ್ಲೆ ನಡೆಸಿದ್ದಾನೆ. ಬಳಿಕ ಆತನನ್ನು ತರಗತಿಯಿಂದ ಹೊರಗೆ ಎಳೆದೊಯ್ದು ಮೊದಲ ಮಹಡಿಯಿಂದ ಎಸೆದು ಕೊಲೆಗೈದಿದ್ದ. ಆನಂತರ ಶಿಕ್ಷಕಿ ಗೀತಾಳಿಗೆ ಸಲಾಕೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿದ್ದ. ಗೀತಾ, ಮುತ್ತಪ್ಪ ಮತ್ತು ಸಂಗನಗೌಡನ ತ್ರಿಕೋನ ಪ್ರೇಮಕತೆಗೆ ಏನೂ ಅರಿಯದ ಮುಗ್ದ ಬಾಲಕ 10 ವರ್ಷದ ಭರತ್ ಬಲಿಯಾಗಿದ್ದ. ಇದೀಗ ಆತನ ತಾಯಿಯೂ ಸಾವನ್ನಪ್ಪಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಅತಿಥಿ ಶಿಕ್ಷಕನಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಶಿಕ್ಷಕಿ ಗೀತಾ ಬಾರಕೇರ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕಳೆದ ಮೂರು ದಿನಗಳಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ ಶಿಕ್ಷಕಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿಇಂದು ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಡಿಸೆಂಬರ್ 19ರಂದು ಗದಗ ಜಿಲ್ಲೆಯ ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೃತ ಶಿಕ್ಷಕಿ ಗೀತಾ ಅವರ ಮೇಲೆ ಅತಿಥಿ ಶಿಕ್ಷಕ ಮುತ್ತಪ್ಪ ಹಲ್ಲೆ ಮಾಡಿ ಪರಾರಿಯಾಗಿದ್ದ. ಕೂಡಲೇ ಸ್ಥಳದಲ್ಲಿದ್ದ ಗ್ರಾಮಸ್ಥರು ಆಯಂಬುಲೆನ್ಸ್ ಮೂಲಕ ಶಿಕ್ಷಕಿಯನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿ, ಚಿಕಿತ್ಸೆಗೆ ದಾಖಲು ಮಾಡಿದ್ದರು. ಅಂದಿನಿಂದ ಅನುಭವಿ ವೈದ್ಯರು ಶಿಕ್ಷಕಿಗೆ ಚಿಕಿತ್ಸೆ ನೀಡುತ್ತಿದ್ದರು. ಆದರೆ ಇಂದು ಶಿಕ್ಷಕಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.