ನವದೆಹಲಿ, ಡಿ 23 (DaijiworldNews/DB): ನನ್ನಿಬ್ಬರು ಮಕ್ಕಳು ವಿದೇಶಗಳಲ್ಲಿ ಓದುತ್ತಿದ್ದಾರೆ. ಸಾಧ್ಯವಾದರೆ ಅಲ್ಲಿನ ಪೌರತ್ವ ಪಡೆದುಕೊಂಡು ಅಲ್ಲೇ ನೆಲೆಸಿ ಎಂದು ಅವರಿಬ್ಬರಿಗೂ ಹೇಳಿದ್ದೇನೆ ಎಂದು ರಾಷ್ಟ್ರೀಯ ಜನತಾ ದಳ(ಆರ್ಜೆಡಿ) ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಬಾರಿ ಸಿದ್ದಿಕ್ಕಿ ಹೇಳಿದ್ದಾರೆ. ಸದ್ಯ ಸಿದ್ದಿಕಿ ಮಾತುಗಳು ವಿವಾದಕ್ಕೆ ಕಾರಣವಾಗಿದೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಮುಸ್ಲಿಮರ ವಿರುದ್ದ ತಾರತಮ್ಯ ಮಾಡಲಾಗುತ್ತಿದೆ. ನನ್ನದೇ ಉದಾಹರಣೆಯನ್ನೇ ಇದಕ್ಕೆ ನೀಡಬಹುದು. ಹೀಗಾಗಿ ಹಾರ್ವರ್ಡ್ನಲ್ಲಿ ಓದುತ್ತಿರುವ ಮಗ ಮತ್ತು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಪದವಿ ಪಡೆದ ಮಗಳಿಗೆ ವಿದೇಶದಲ್ಲೇ ಉದ್ಯೋಗ ಹುಡುಕಿಕೊಂಡು ಅಲ್ಲಿನ ಪೌರತ್ವ ಪಡೆದು ಅಲ್ಲೇ ನೆಲೆಸಿ ಎಂಬುದಾಗಿ ಸಲಹೆ ನೀಡಿದ್ದೇನೆ ಎಂದರು.
ಇನ್ನು ಸಿದ್ದಿಕಿ ಮಾತು ರಾಜಕೀಯವಾಗಿ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಇದು ದೇಶ ವಿರೋಧಿ ಮಾತುಗಳು ಎಂದು ಬಿಜೆಪಿ ಟೀಕಿಸಿದೆ. ಅಲ್ಲದೆ ಸಿದ್ದಿಕಿ ಪಾಕ್ಗೆ ಹೋಗಿ ನೆಲೆಸುವ ಬಗ್ಗೆ ಮಾತನಾಡುತ್ತಿರಬಹದು ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಆದರೆ ಆರ್ಜೆಡಿ ಮಿತ್ರಪಕ್ಷ ಸಂಯುಕ್ತ ಜನತಾದಳವು ಸಿದ್ದಿಕಿ ಮಾತುಗಳನ್ನು ಸಮರ್ಥಿಸಿದ್ದು, ಬಿಜೆಪಿ ಅಥವಾ ಮುಸ್ಲಿಂ ಪದವನ್ನು ಸಿದ್ದಿಕಿ ತಮ್ಮ ಮಾತಿನಲ್ಲಿ ಎಲ್ಲಿಯೂ ನೇರವಾಗಿ ಬಳಕೆ ಮಾಡಿಲ್ಲ. ಹೀಗಿರುವಾಗ ಬಿಜೆಪಿ ಅವರ ವಿರುದ್ದ ಹರಿಹಾಯ್ದಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದೆ.