ಕೊಚ್ಚಿ, ಡಿ 22 ( DaijiworldNews/MS): ತಂದೆಯ ಜೀವ ಉಳಿಸಲು ಅಪ್ರಾಪ್ತ ಬಾಲಕಿಯ ಅವಿರತ ಹೋರಾಟವನ್ನು ಗಮನಿಸಿದ ಕೇರಳ ಹೈಕೋರ್ಟ್ "ತನ್ನ ಯಕೃತ್ತಿನ (ಪಿತ್ತಜನಕಾಂಗ) ಒಂದು ಭಾಗವನ್ನು ದಾನ ಮಾಡಲು " ಅಪ್ರಾಪ್ತ ಪುತ್ರಿಗೆ ಅನುಮತಿ ನೀಡಿದೆ.
ಯಕೃತ್ತಿನ ಒಂದು ಭಾಗವನ್ನು ದಾನ ಮಾಡುವ ಮೂಲಕ ತನ್ನ ಅಸ್ವಸ್ಥ ತಂದೆಯ ಜೀವ ಉಳಿಸುವ ಉದ್ದೇಶದಿಂದ ಬಾಲಕಿ ಅಂಗ ದಾನಕ್ಕೆ ಮುಂದುವರಿಯಬಹುದು ಎಂದು ಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ನಿಯಮಗಳು, 2014 ರ ನಿಯಮ 18 ರ ಅಡಿಯಲ್ಲಿ ಸೂಚಿಸಿದಂತೆ ದಾನಿಯಾಗಲು ವಯಸ್ಸಿನಲ್ಲಿ ತೊಡಕಿನಿಂದ ವಿನಾಯಿತಿ ಕೋರಿದ್ದ 17 ವರ್ಷದ ಬಾಲಕಿಯ ಅರ್ಜಿಗೆ ಹೈಕೋರ್ಟ್ಅನುಮತಿ ನೀಡಿದೆ
ಏನಿದು ಪ್ರಕರಣ?
ದೇವಾನಂದ ಪಿ ಪಿ ಎಂಬ 17 ವರ್ಷದ ಬಾಲಕಿ ಮತ್ತು ಕೇರಳ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇನ್ನಿತರರ ನಡುವಣ ಪ್ರಕರಣ ಹೈಕೋರ್ಟ್ ನಲ್ಲಿದ್ದ ಪ್ರಕರಣ ಇದಾಗಿದೆ.
ಬಾಲಕಿಯ ತಂದೆ ಪ್ರತೀಶ್ ಪಿ ಜಿ ಡಿಕಂಪೆನ್ಸೇಟೆಡ್ ಕ್ರಾನಿಕ್ ಲಿವರ್ ಡಿಸೀಸ್ ಜೊತೆಗೆ ಹೆಪಟೊಸೆಲ್ಯುಲರ್ ಕಾರ್ಸಿನೋಮ, ಆಲ್ಕೊಹಾಲ್ ನಿಂದಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದರು. ದೇವಾನಂದಗೆ ತಂದೆಯ ಜೀವ ಉಳಿಸಲು ಇರುವ ಏಕೈಕ ಮಾರ್ಗವೆಂದರೆ ಹಾನಿಗೊಳಗಾದ ಯಕೃತ್ತನ್ನು ಕಸಿ ಶಸ್ತ್ರಚಿಕಿತ್ಸೆಯ ಮೂಲಕ ಬದಲಾಯಿಸುವುದು ಆಗಿತ್ತು. ರೋಗಿಯ ಹತ್ತಿರದ ಸಂಬಂಧಿಕರಲ್ಲಿ, ಮಗಳ ಲಿವರ್ ಮಾತ್ರ ಹೊಂದಾಣಿಕೆಯಾಗುತ್ತಿದೆ ಎಂದು ವೈದ್ಯಕೀಯ ತಪಾಸಣೆ ವೇಳೆ ಕಂಡುಬಂದಿದೆ.
ದೇವಾನಂದ ತನ್ನ ತಂದೆಯ ಜೀವವನ್ನು ಉಳಿಸಲು ತನ್ನ ಅಂಗವನ್ನು ದಾನ ಮಾಡಲು ಸಿದ್ಧಳಾಗಿದ್ದಳು. ಆದರೆ ಕೇವಲ 17 ವರ್ಷ ವಯಸ್ಸಿನವಳಾಗಿರುವುದು ಅವಳಿಗೆ ಸಮಸ್ಯೆಯಾಗಿತ್ತು.
ಯಾಕೆಂದರೆ ಮಾನವ ಅಂಗಗಳು ಮತ್ತು ಅಂಗಾಂಶಗಳ ಕಸಿ ಕಾಯಿದೆ, 1994 ಮತ್ತು ಅದರ ಅಡಿಯಲ್ಲಿನ ನಿಯಮಗಳ ನಿಬಂಧನೆಗಳು, ಅಪ್ರಾಪ್ತ ವಯಸ್ಕರ ಅಂಗಾಂಗ ದಾನಕ್ಕೆ ಅನುಮತಿಸಲಾಗುವುದಿಲ್ಲ.
ಕೊನೆಗೆ ಕೋರ್ಟ್ ಮೆಟ್ಟಿಲೇರಿದ್ದ ದೇವಾನಂದ ಅರ್ಜಿಯನ್ನು ಮನ್ನಿಸಿ "ದೇವಾನಂದ ಅವರ ಪ್ರಕರಣವನ್ನು ಅಧ್ಯಯನ ಮಾಡಲು ಕೇರಳ ರಾಜ್ಯ ಅಂಗ ಅಂಗಾಂಶ ಕಸಿ ಸಂಸ್ಥೆ (ಕೆ-ಎಸ್ಒಟಿಟಿಒ) ರಚಿಸಿದ್ದ ತಜ್ಞರ ಸಮಿತಿಯು ಸಲ್ಲಿಸಿದ ವರದಿಯನ್ನು ಪರಿಗಣಿಸಿ" ನ್ಯಾಯಾಲಯವು ಅಂಗಾಂಗ ದಾನ ಮಾಡಬಹುದೆಂಬ ತೀರ್ಪು ನೀಡಿದೆ.
"ದೇವಾನಂದಾ ಅವರು ನಡೆಸಿದ ಅವಿರತ ಹೋರಾಟ ಕಡೆಗೂ ಯಶಸ್ವಿಯಾಗಿದೆ ಎನ್ನುವುದನ್ನು ಕಂಡಾಗ ಹೃದಯ ತುಂಬಿ ಬರುತ್ತದೆ. ತನ್ನ ತಂದೆಯ ಜೀವ ಉಳಿಸಲು ಅರ್ಜಿದಾರರು ನಡೆಸಿದ ಹೋರಾಟವನ್ನು ಶ್ಲಾಘಿಸುವೆ. ದೇವಾನಂದಾರಂತಹ ಮಕ್ಕಳನ್ನು ಪಡೆದ ತಂದೆ ತಾಯಿಗಳು ಧನ್ಯರು" ಎಂದು ದೇವಾನಂದಾ ಅವರ ದೃಢತೆಗೆ ನ್ಯಾ. ಅರುಣ್ ಮೆಚ್ಚುಗೆ ಸೂಚಿಸಿ ಅದನ್ನು ಆದೇಶದಲ್ಲಿ ದಾಖಲಿಸಿದ್ದಾರೆ.