ಬೆಳಗಾವಿ, ಡಿ 22 (daijiworldNews/HR): ಅಧಿವೇಶನ ನಡೆಯುವ ದಿನಗಳಲ್ಲಿ ಮಾತ್ರ ಮಿಂಚಿ, 15 ದಿನದ ಬಳಿಕ ಭೂತ ಬಂಗಲೆಯಾಗುವ ಸುವರ್ಣಸೌಧ ಬಾಡಿಗೆಗೆ ಕೊಡಿ, ಮಗಳ ಹುಟ್ಟುಹಬ್ಬ ಸಮಾರಂಭ ಮಾಡುತ್ತೇನೆ ಎಂದು ವಕೀಲರೊಬ್ಬರು ವಿಧಾನ ಪರಿಷತ್ತ ಸಭಾಪತಿಗಳಿಗೆ ಪತ್ರ ಬರೆದಿರುವ ಘಟನೆ ನಡೆದಿದೆ.
ವಿಧಾನ ಪರಿಷತ್ತ ಸಭಾಪತಿಗಳಿಗೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ನಿವಾಸಿಯಾಗಿರುವ ಮಲ್ಲಿಕಾರ್ಜುನ ದುಂಡಪ್ಪ ಚೌಕಾಶಿ ಎಂಬುವವರು ಪತ್ರ ಬರೆದಿದ್ದು, ಮಗಳ ಹುಟ್ಟುಹಬ್ಬದ ಆಚರಣೆಗೆ ಸುವರ್ಣಸೌಧವನ್ನು ಬಾಡಿಗೆ ಕೇಳಿದ್ದಾರೆ.
ಇನ್ನು ವರ್ಷದಲ್ಲಿ 15 ದಿನ ಮಾತ್ರ ಸುವರ್ಣ ಸೌಧ ಕಂಗೊಳಿಸುತ್ತದೆ. ಉಳಿದ ದಿನಗಳಲ್ಲಿ ಭೂತ ಬಂಗಲೆ ರೀತಿ ಇರುವ ಅದನ್ನು ಬಾಡಿಗೆ ನೀಡಿ ಎಂದು ಹೇಳಿದ್ದಾರೆ.
ನನ್ನ ಒಬ್ಬಳೆ ಪುತ್ರಿಯಾದ ಕುಮಾರಿ ಮಣಿಗೆ ಜನವರಿ 30 ಕ್ಕೆ 5 ವರ್ಷ ಮುಗಿದು 6 ವರ್ಷ ತುಂಬಲಿದ್ದು, ಆಕೆ ಒಂದನೇಯ ತರಗತಿಯ ಪ್ರವೇಶ ಪಡೆಯಬೇಕಿದೆ. ಇದು ಅವಳ ಜೀವನದ ಅಮೂಲ್ಯ ಕ್ಷಣ. ಹೀಗಾಗಿ ಅವಳ ಹುಟ್ಟು ಹಬ್ಬವನ್ನು ಆಚರಿಸುವದರೊಂದಿಗೆ ನಮ್ಮ ಭಾಗದಲ್ಲಿ ಚಿಕ್ಕ ಹೆಣ್ಣು ಮಕ್ಕಳಿಗೆ ಹುಟದಟ್ಟಿ ಕಾರ್ಯಕ್ರಮ ಮಾಡುವ ಪದ್ಧತಿಯಿದ್ದು ಇದು ಕೂಡ ಜೀವನದಲ್ಲಿ ಒಮ್ಮೆ ಬರುವಂತಹದ್ದು. ಆದ್ದರಿಂದ ವರ್ಷದಲ್ಲಿ 15 ದಿನ ಕಲರವದಿಂದ ಕೂಡಿ ಉಳಿದ ದಿನ ಭೂತ ಬಂಗ್ಲೆಯಂತಿರುವ ಕರ್ನಾಟಕ ಸುವರ್ಣ ವಿಧಾನಸೌಧದ ಸಭಾಂಗಣವನ್ನು ಬಾಡಿಗೆ ನೀಡಬೇಕು ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.