ಬಿಜ್ನೋರ್, ಡಿ 22 (DaijiworldNews/DB): ಬಿಡಾಡಿ ದನಗಳಿಂದ ಬೇಸತ್ತ ಗ್ರಾಮವೊಂದರ ಜನರು ಸರ್ಕಾರಿ ಶಾಲೆಯ ಬೀಗ ಒಡೆದು ಶಾಲಾ ಆವರಣದಲ್ಲಿ 80ಕ್ಕೂ ಅಧಿಕ ಬಿಡಾಡಿ ದನಗಳನ್ನು ಕೂಡಿ ಹಾಕಿದ ಘಟನೆ ಬಿಜ್ನೋರ್ ಜಿಲ್ಲೆಯ ಕೊತ್ವಾಲಿ ದೇಹತ್ ಬ್ಲಾಕ್ನ ಬಂಕಾಪುರ ಗ್ರಾಮದಲ್ಲಿ ನಡೆದಿದೆ. ದನಗಳನ್ನು ಬಿಟ್ಟ ಕಾರಣ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪಾಠ ಕೇಳಲು ಸಾಧ್ಯವಾಗದೆ ರಜೆ ಘೋಷಿಸಿದ ಪ್ರಸಂಗ ನಡೆಯಿತು.
ಬಿಡಾಡಿ ದನಗಳು ತಮ್ಮ ಬೆಳೆಗಳನ್ನು ನಾಶ ಮಾಡುತ್ತಿವೆ. ಹಲವಾರು ಬಾರಿ ಸ್ಥಳೀಯಾಡಳಿತಕ್ಕೆ ದೂರಿತ್ತರೂ ಸಮಸ್ಯೆ ಪರಿಹರಿಸುವ ಗೋಜಿಗೆ ಹೋಗಿಲ್ಲ. ಹೀಗಾಗಿ ಶಾಲಾ ಆವರಣದಲ್ಲಿ ಅವುಗಳನ್ನು ಕೂಡಿ ಹಾಕಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ದನಗಳನ್ನು ಶಾಲೆಯ ಆವರಣದಲ್ಲಿ ಕೂಡಿ ಹಾಕಿದ್ದರಿಂದ ವಿದ್ಯಾರ್ಥಿಗಳಿಗೆ ಶಾಲೆ ಪ್ರವೇಶಿಸಲು ಸಾಧ್ಯವಾಗಲಿಲ್ಲ. ಅಲ್ಲದೆ, ಕೆಲವು ವಿದ್ಯಾರ್ಥಿಗಳನ್ನು ಶಾಲೆಯೊಳಗೆ ಪ್ರವೇಶಿಸದಂತೆ ತಡೆದು ಬಲವಂತವಾಗಿ ಮನೆಗೆ ಕಳುಹಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ತಾತ್ಕಾಲಿಕವಾಗಿ ರಜೆ ಸಾರಲಾಗಿದ್ದು, ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಬಬಿತಾ ದೇವಿ ತಿಳಿಸಿದ್ದಾರೆ.
ಮಾಹಿತಿ ತಿಳಿದ ಕೂಡಲೇ ಬಿಜ್ನೋರ್ ಉಪ ವಿಭಾಗಾಧಿಕಾರಿ ಮೋಹಿತ್ ಕುಮಾರ್ ಹಾಗೂ ವೃತ್ತಾಧಿಕಾರಿ ಅನಿಲ್ ಕುಮಾರ್ ಸ್ಥಳಕ್ಕಾಗಮಿಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಎಲ್ಲಾ ದನಗಳನ್ನು ಗೋಶಾಲೆಗೆ ರವಾನಿಸಲಾಯಿತು.