ನವದೆಹಲಿ, ಡಿ 21 ( DaijiworldNews/MS): ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಅಮೀನ್ ಪೂನವಾಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಹಿಂಪಡೆದಿದ್ದಾನೆ.
ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಅಫ್ತಾಬ್ ನವೆಂಬರ್ 17 ರಂದು ಜಾಮಿನು ಅರ್ಜಿ ಸಲ್ಲಿಸಿದ್ದ. ನ್ಯಾಯಾಲಯ ಇದರ ವಿಚಾರಣೆಯನ್ನು ಮುಂದೂಡಿತ್ತು.
ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವುದು ತನ್ನ ಗಮನಕ್ಕೆ ಬಂದಿರಲಿಲ್ಲ. ತಪ್ಪು ಸಂವಹನದಿಂದಾಗಿ ಅರ್ಜಿ ಸಲ್ಲಿಸಲಾಗಿತ್ತು ಎಂದು ಆಫ್ತಾಬ್ ಪೂನಾವಾಲಾ ಹೇಳಿರುವುದಾಗಿ ಈ ಹಿಂದೆ ವರದಿಯಾಗಿತ್ತು. ಅಫ್ತಾಬ್ ಅವರೊಂದಿಗೆ 50 ನಿಮಿಷಗಳ ಸುದೀರ್ಘ ಚರ್ಚೆಯ ನಂತರ ಜಾಮೀನು ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ ಎಂದು ಅಫ್ತಾಬ್ ಪರ ವಕೀಲ ಎಂಎಸ್ ಖಾನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅಫ್ತಾಬ್ ತನ್ನ ಲೀವ್ ಇನ್ ಟುಗೆದರ್ ಗೆಳತಿ ಶ್ರದ್ಧಾ ಅವರನ್ನು ದಕ್ಷಿಣ ದೆಹಲಿಯ ಮಹ್ರೌಲಿಯಲ್ಲಿರುವ ತನ್ನ ಫ್ಲ್ಯಾಟ್ನಲ್ಲಿ ಮೇ ತಿಂಗಳಲ್ಲಿ ಕತ್ತು ಹಿಸುಕಿ ಭೀಕರವಾಗಿ ಕೊಲೆ ಮಾಡಿದ್ದ. ನಂತರ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ, 300 ಲೀಟರ್ ಸಾಮರ್ಥ್ಯದ ಫ್ರಿಜ್ನಲ್ಲಿ ಸುಮಾರು ಮೂರು ವಾರಗಳವರೆಗೆ ಇರಿಸಿದ್ದ. ನಂತರ ಅವುಗಳನ್ನು ನಗರದ ವಿವಿಧೆಡೆ ಮತ್ತು ಛತರ್ಪುರ ಸಮೀಪದ ಅರಣ್ಯ ಪ್ರದೇಶದಲ್ಲಿ ಹಲವು ದಿನಗಳವರೆಗೆ ಒಂದೊಂದಾಗಿ ಎಸೆದು ಬಂದಿದ್ದ.