ಬೆಂಗಳೂರು, ಡಿ 22 (DaijiworldNews/DB): ಚರ್ಮ ಗಂಟು ಕಾಯಿಲೆಯಿಂದ ರಾಜ್ಯದಲ್ಲಿ ಈವರೆಗೆ ಒಟ್ಟು 21,305 ಜಾನುವಾರುಗಳು ಸಾವನ್ನಪ್ಪಿವೆ.
ಈ ಕುರಿತು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅವರು ಬುಧವಾರ ವಿಧಾನಸಭೆಗೆ ಮಾಹಿತಿ ನೀಡಿದ್ದು, ರಾಜ್ಯದ 234 ತಾಲೂಕುಗಳ 15,977 ಗ್ರಾಮಗಳಲ್ಲಿ ಡಿ.19ರವರೆಗೆ 2,37,194 ಜಾನುವಾರುಗಳು ಚರ್ಮಗಂಟು ಕಾಯಿಲೆಗೆ ಒಳಗಾಗಿದ್ದು, ಈ ಪೈಕಿ 21,305 ಜಾನುವಾರುಗಳು ಸಾವನ್ನಪ್ಪಿವೆ ಎಂದರು.
ಕಾಯಿಲೆಯಿಂದ ನರಳುತ್ತಿದ್ದ 1,64,254 ಜಾನುವಾರುಗಳು ರೋಗದಿಂದ ಗುಣಮುಖರಾಗಿದ್ದು, ಹಾಲು ಕೊಡುವ ಹಸುಗಳು ಸೇರಿದಂತೆ ರಾಜ್ಯದ ಒಟ್ಟು 1.14 ಕೋಟಿ ಜಾನುವಾರುಗಳಲ್ಲಿ 69.37 ಲಕ್ಷ (ಶೇ.60.57ರಷ್ಟು) ಲಸಿಕೆ ಹಾಕಲಾಗಿದೆ.
ಬೆಳಗಾವಿಯಲ್ಲಿ ಹೆಚ್ಚು ಸಾವು
ಬೆಳಗಾವಿಯಲ್ಲಿ ಅತಿ ಹೆಚ್ಚು ಚರ್ಮಗಂಟು ಕಾಯಿಲೆಯಿಂದ ಜಾನುವಾರುಗಳ ಸಾವು ವರದಿಯಾಗಿದ್ದು, ಅಲ್ಲಿ 5,335 ಜಾನುವಾರುಗಳು ಜೀವ ಕಳೆದುಕೊಂಡಿವೆ. ನಂತರ ಬಳ್ಳಾರಿ ಮತ್ತು ಹಾವೇರಿಯಲ್ಲಿ ಕ್ರಮವಾಗಿ 2,887 ಮತ್ತು 2,599 ಸಾವುಗಳು ಸಂಭವಿಸಿವೆ. ಕೊಡಗಿನಲ್ಲಿ ಒಂದೇ ಒಂದು ಸಾವು ವರದಿಯಾಗದಿದ್ದರೆ, ಉಡುಪಿಯಲ್ಲಿ ಎರಡು ಜಾನುವಾರುಗಳು ಮೃತಪಟ್ಟಿವೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಚರ್ಮರೋಗಕ್ಕೆ ತುತ್ತಾಗಿ ಸಾವನ್ನಪ್ಪುವ ರಾಸುಗಳ ಮಾಲಕರಿಗೆ ತಲಾ 5,000, ಹಾಲು ಕರೆಯುವ ಹಸುಗಳಿಗೆ 20,000 ಮತ್ತು ಎತ್ತುಗಳ ಮಾಲಕರಿಗೆ 30,000 ರೂ. ಪರಿಹಾರವನ್ನು ಸರ್ಕಾರ ನಿಗದಿಪಡಿಸಿದೆ.
ಸಾವನ್ನಪ್ಪಿದ ಜಾನುವಾರುಗಳ ಮಾಲೀಕರಿಗೆ ಒಟ್ಟು 7 ಕೋಟಿ ರೂ. ಪರಿಹಾರವನ್ನು ಈಗಾಗಲೇ ವಿತರಿಸಲಾಗಿದೆ. ಸತ್ತ ಜಾನುವಾರುಗಳ ಮಾಲೀಕರಿಗೆ ಹೆಚ್ಚುವರಿ ಪರಿಹಾರ ನೀಡಲು ಸರ್ಕಾರದಿಂದ 30 ಕೋಟಿ ರೂ. ಹೆಚ್ಚುವರಿ ಅನುದಾನ ಕೋರಲಾಗಿತ್ತು.