ಮಧ್ಯಪ್ರದೇಶ, ಡಿ 21 (DaijiworldNews/DB): ಕಸದ ಗಾಡಿಗಳ ಸುಸೂತ್ರ ನಿರ್ವಹಣೆ ಮತ್ತು ಸ್ವಚ್ಚತೆಗೆ ಜಿಲ್ಲಾಡಳಿತಕ್ಕೆ ಪೋಸ್ಟ್ಕಾರ್ಡ್ನಲ್ಲಿ ಸಲಹೆ ನೀಡಿದ್ದ 13 ವರ್ಷದ ಬಾಲಕನೊಬ್ಬ ಅದೇ ಜಿಲ್ಲೆಗೆ ಸ್ವಚ್ಚ ಭಾರತ್ ಮಿಷನ್ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾನೆ. ಅಧಿಕಾರಿಗಳು ಬಾಲಕನ ಪ್ರತಿಭೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಟ್ನಿ ಜಿಲ್ಲೆಯಲ್ಲಿ ಸಿ.ಎಂ. ರೈಸ್ ಮಾದರಿ ಶಾಲೆಯಲ್ಲಿ 9ನೇ ವಿದ್ಯಾರ್ಥಿಯಾಗಿರುವ ಅಶುತೋಷ್ ಮಂಕೆ ಎಂಬಾತನೇ ಸ್ವಚ್ಚ ರಾಯಭಾರಿಯಾಗಿ ಆಯ್ಕೆಯಾದ ಬಾಲಕ. ಜಿಲ್ಲೆಯಲ್ಲಿ ಸ್ವಚ್ಚತೆಯ ನಿರ್ವಹಣೆ ಕುರಿತು ಈತ ಪೋಸ್ಟ್ ಕಾರ್ಡ್ನಲ್ಲಿ ಬರೆದು ಜಿಲ್ಲಾಡಳಿತಕ್ಕೆ ಕಳುಹಿಸಿದ್ದ. ಕಸದ ಗಾಡಿಗಳ ಸುಸೂತ್ರ ನಿರ್ವಹಣೆ ಮತ್ತು ಸಾಮಾನ್ಯ ಸ್ವಚ್ಚತೆಯನ್ನು ಹೇಗೆ ಕೈಗೊಳ್ಳಬಹುದು ಎಂಬುದಾಗಿ ಇದರಲ್ಲಿ ಬಾಲಕ ಸಲಹೆ ನೀಡಿದ್ದ. ಬಾಲಕನ ಸಲಹೆ ಓದಿದ ಕಲೆಕ್ಟರ್ ಅವಿ ಪ್ರಸಾದ್ ಅವರು ಸಲಹೆಯಿಂದ ಪ್ರಭಾವಿತರಾಗಿ ಬಾಲಕ ಅಶುತೋಷ್ನನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಮಾತನಾಡಿದರು. ಆ ಬಳಿಕ ಆತನನ್ನು ಕಟ್ನಿ ಜಿಲ್ಲೆಯ ಸ್ವಚ್ಚ ಭಾರತ್ ಮಿಷನ್ನ ರಾಯಭಾರಿಯಾಗಿ ನೇಮಕ ಮಾಡಿದ್ದಾರೆ.
ಇನ್ನು ಬಾಲಕನ ನೇಮಕ ಕುರಿತು ಪ್ರತಿಕ್ರಿಯಿಸಿರುವ ಕಲೆಕ್ಟರ್ ಅವಿ ಪ್ರಸಾದ್, ಬಾಲಕ ಸ್ವಚ್ಚತೆ ಬಗ್ಗೆ ನೀಡಿದ ಸಲಹೆಗಳನ್ನು ಓದಿದ ಮೇಲೆ ಆತನನ್ನು ಭೇಟಿಯಾಗಲು ಬಯಸಿದ್ದೆ. ಆತನ ಪ್ರತಿಭೆ ಮತ್ತು ಆತ್ಮವಿಶ್ವಾಸ ನನ್ನನ್ನು ಪ್ರೇರೇಪಿಸಿತು. ಹೀಗಾಗಿ ಆತನನ್ನು ಬ್ರಾಂಡ್ ಅಂಬಾಸಿಡರ್ ಮಾಡುವ ನಿರ್ಧಾರ ಕೈಗೊಂಡೆ ಎಂದಿದ್ದಾರೆ.
ಸಹೋದರನ ಪೋಸ್ಟ್ ಕಾರ್ಡ್ ಸಲಹೆಗೆ ಜಿಲ್ಲಾಧಿಕಾರಿಯವರು ಇಷ್ಟು ಬೇಗ ಸಲಹೆ ನೀಡುತ್ತಾರೆಂದು ನಿರೀಕ್ಷೆಯೇ ಮಾಡಿರಲಿಲ್ಲ. ಇದೀಗ ಅವರ ನಿರ್ಧಾರ ಖುಷಿ ತಂದಿದೆ ಎಂದು ಬಾಲಕನ ಸಹೋದರಿ ಆಯುಷಿ ಮಂಕೆ ಹೇಳಿದ್ದಾರೆ.