ಪುಣೆ, ಡಿ 21 (DaijiworldNews/DB): ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ. ಆದರೆ ಭಾರತದಲ್ಲಿ ವ್ಯಾಕ್ಸಿನೇಶನ್ ಉತ್ತಮ ಮಟ್ಟಕ್ಕೆ ತಲುಪಿರುವುದರಿಂದ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ) ಸಿಇಒ ಆದಾರ್ ಪೂನಾವಾಲ ಹೇಳಿದ್ದಾರೆ.
ಚೀನಾದಲ್ಲಿ ಕೊರೊನಾ ಸಂಖ್ಯೆ ಏರುಗುತಿಯಲ್ಲಿ ಸಾಗುತ್ತಿರುವುದು ಕಳವಳಕಾರಿ ವಿಚಾರ. ಆದರೆ ಭಾರತದಲ್ಲಿ ಕೋವಿಡ್ ವ್ಯಾಕ್ಸಿನೇಶನ್ ಉತ್ತಮವಾಗಿ ನಡೆದಿದೆ. ವ್ಯಾಕ್ಸಿನೇಶನ್ ಕವರೇಜ್ ಮತ್ತು ಟ್ರ್ಯಾಕ್ ರೆಕಾರ್ಡ್ ಗಮನಿಸಿದಾಗ ನಮ್ಮ ದೇಶದಲ್ಲಿ ಕೊರೊನಾ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಕೊರೊನಾ ಬಗ್ಗೆ ಭಯ ಅನಗತ್ಯ. ಆದರೆ ಕೇಂದ್ರ ಆರೋಗ್ಯ ಸಚಿವಾಲಯ ನಿಗದಿಪಡಿಸಿದ ಮಾರ್ಗಸೂಚಿಯನ್ನು ಪಾಲಿಸುವುದು ಹಾಗೂ ಅನುಸರಿಸುವುದನ್ನು ಮುಂದುವರಿಸಬೇಕು ಎಂದು ಇದೇ ವೇಳೆ ಜನರಿಗೆ ಅವರು ಸಲಹೆ ಮಾಡಿದ್ದಾರೆ.
ಅಮೆರಿಕ ಮತ್ತು ಚೀನಾದಲ್ಲಿ ಕೋವಿಡ್ ಉಲ್ಬಣಗೊಳ್ಳುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಕೊರೊನಾವೈರಸ್ ಹೊಸ ರೂಪಾಂತರಗಳನ್ನು ಟ್ರ್ಯಾಕ್ ಮಾಡಲು ವೈರಾಣುವಿನ ವಂಶವಾಹಿಗಳ ಸಂರಚನೆಯ ವಿಶ್ಲೇಷಣೆ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಆಧಾರ್ ಪೂನಾವಾಲ ಅವರು ಟ್ವೀಟ್ ಮಾಡಿದ್ದಾರೆ.