ನವದೆಹಲಿ, ಡಿ 21 (DaijiworldNews/DB): ಚೀನಾ, ಅಮೆರಿಕಾ ಸೇರಿದಂತೆ ಕೆಲವು ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಭಾರತದಲ್ಲಿ ಗರಿಷ್ಠ ಮುನ್ನೆಚ್ಚರಿಕೆ ವಹಿಸಲು ಕೇಂದ್ರ ಮುಂದಾಗಿದೆ. ಜನಜಂಗುಳಿಯಿರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವಂತೆ ಕೇಂದ್ರ ಮಹತ್ವದ ಸೂಚನೆ ನೀಡಿದೆ.
ಭಾರತದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ತಜ್ಞರ ತಂಡದೊಂದಿಗೆ ದೆಹಲಿಯಲ್ಲಿ ಇಂದು ಸಭೆ ನಡೆಸಿದ್ದು, ಈ ವೇಳೆ ಮಾಸ್ಕ್ ಧರಿಸುವ ಅಗತ್ಯತೆಯನ್ನು ತಜ್ಞರೂ ಕೂಡಾ ಒತ್ತಿ ಹೇಳಿದ್ದಾರೆ.
ಸಭೆಯ ಬಳಿಕ ಟ್ವೀಟ್ ಮಾಡಿರುವ ಸಚಿವರು, ಕೋವಿಡ್ ಇನ್ನೂ ಮುಗಿದಿಲ್ಲ. ತಪಾಸಣೆಯನ್ನು ತೀವ್ರಗೊಳಿಸುವಂತೆ ಈಗಾಗಲೇ ಸಂಬಂಧಪಟ್ಟವರಿಗೆ ನಿರ್ದೇಶಿಸಲಾಗಿದೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ನಾವು ಸಿದ್ದರಾಗಿದ್ದೇವೆ ಎಂದಿದ್ದಾರೆ.
ಇನ್ನು ಸಭೆ ಬಳಿಕ ಮಾತನಾಡಿದ ನೀತಿ ಆಯೋಗದ ಡಾ. ವಿ.ಕೆ. ಪೌಲ್ ಅವರು, ಸದ್ಯ ಮುನ್ನೆಚ್ಚರಿಕೆಯಾಗಿ ಕೋವಿಡ್ ಲಸಿಕೆಯನ್ನು ದೇಶದಲ್ಲಿ ಕೇವಲ ಶೇ. 27-28 ಜನ ತೆಗೆದುಕೊಂಡಿದ್ದಾರೆ. ಹೀಗಾಗಿ ಜನರಿಗೆ ಲಸಿಕೆ ತೆಗೆದುಕೊಳ್ಳಲು ಮನವಿ ಮಾಡುತ್ತಿದ್ದೇವೆ. ವಿಶೇಷವಾಗಿ ಹಿರಿಯ ನಾಗರಿಕರು ಲಸಿಕೆ ಪಡೆದುಕೊಳ್ಳಲೇಬೇಕು. ಹೊರಾಂಗಣ, ಒಳಾಂಗಣ ಸೇರಿದಂತೆ ಜನಜಂಗುಳಿಯಿರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ. ಕೋವಿಡ್ನಿಂದ ರಕ್ಷಿಸಿಕೊಳ್ಳಲು ಈ ಮಾರ್ಗಸೂಚಿಗಳನ್ನು ಅನುಸರಿಸುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಆರೋಗ್ಯ ಮತ್ತು ಆಯುಷ್ ಸಚಿವಾಲಯದ ಕಾರ್ಯದರ್ಶಿಗಳು, ಫಾರ್ಮಸ್ಯುಟಿಕಲ್ಸ್ ಮತ್ತು ಬಯೋಟೆಕ್ನಾಲಜಿ ವಿಭಾಗ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನಿರ್ದೇಶಕ ರಾಜೀವ್ ಬೇಲ್, ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ ಪೌಲ್ ಮತ್ತು ನ್ಯಾಷನಲ್ ಟೆಕ್ನಿಕಲ್ ಅಡ್ವಸರಿ ಗ್ರೂಪ್ ಆನ್ ಇಮ್ಯುನೈಜೇಷನ್ ಅಧ್ಯಕ್ಷ ಎನ್.ಎಲ್ ಆರೋರಾ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಚೀನಾ, ಅಮೆರಿಕಾ, ಜಪಾನ್, ಬ್ರೆಜಿಲ್ ಮುಂತಾದೆಡೆ ಕೋವಿಡ್ ಸಂಖ್ಯೆ ಹೆಚ್ಚಳವಾಗುತ್ತಿದೆ. ದೇಶದಲ್ಲಿ ಹರಡುತ್ತಿರುವ ಹೊಸ ರೂಪಾಂತರಿಗಳನ್ನು ಪತ್ತೆ ಹಚ್ಚಲು ಜಿನೋಮ್ ಸೀಕ್ವೆನಿಂಗ್ಸ್ ಪ್ರಮಾಣ ಹೆಚ್ಚಾಗುವ ಅವಶ್ಯವಿದೆ. ಇದರಿಂದ ಆರೋಗ್ಯ ಸಂಬಂಧಿತ ನಿರ್ಧಾರಗಳನ್ನು ಸಕಾಲದಲ್ಲೇ ಕೈಗೊಳ್ಳಲು ಪೂರಕವಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. ತಪಾಸಣೆ ತೀವ್ರಗೊಳಿಸುವುದು, ಪಾಸಿಟಿವ್ ಮಾದರಿಗಳನ್ನು ಕಡ್ಡಾಯವಾಗಿ ಇನ್ಸಾಕಾಗ್ ಪ್ರಯೋಗಾಲಯಗಳಿಗೆ ಜಿನೋಮ್ ಸೀಕ್ವೆನ್ಸಿಂಗ್ಗಾಗಿ ಕಳುಹಿಸಬೇಕು ಸೇರಿದಂತೆ ಅಗತ್ಯ ನಿರ್ದೇಶನಗಳನ್ನು ರಾಜ್ಯಗಳಿಗೆ ಈಗಾಗಲೇ ರವಾನಿಸಲಾಗಿದೆ. ಇದರೊಂದಿಗೆ ಆರೋಗ್ಯ ಪರಿಸ್ಥಿತಿಗಳನ್ನು ಅವಲೋಕಿಸಲು ಆಂತರಿಕ ಕಾರ್ಯಪಡೆ ಕೂಡಾ ಕೇಂದ್ರ ಸರ್ಕಾರದಿಂದ ರಚನೆಯಾಗಿದೆ.