ಚೆನ್ನೈ, ಡಿ 21 (DaijiworldNews/DB): ತಮಿಳುನಾಡು ಬಿಜೆಪಿ ಘಟಕದ ಅಣ್ಣಾಮಲೈ ಅವರ ದುಬಾರಿ ವಾಚ್ ಪ್ರಕರಣವು ತಮಿಳುನಾಡು ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಆದರೆ ತಾವು ದೇಶಭಕ್ತಿಯ ಪ್ರತೀಕವಾಗಿ ದುಬಾರಿ ವಾಚ್ನ್ನು ಧರಿಸುತ್ತಿರುವುದಾಗಿ ಅಣ್ಣಾಮಲೈ ಸಮರ್ಥಿಸಿಕೊಂಡಿದ್ದಾರೆ.
ಕೇವಲ ಐದು ಆಡುಗಳನ್ನು ಹೊಂದಿರುವ ವ್ಯಕ್ತಿ 5 ಲಕ್ಷ ರೂ. ಮೌಲ್ಯದ ಬೆಲ್ ಆಂಡ್ ರಾಸ್ ಲಿಮಿಟೆಡ್ ಎಡಿಷನ್ ರಫೇಲ್ ವಾಚ್ ಧರಿಸುವುದಕ್ಕೆ ಹೇಗೆ ಸಾಧ್ಯ ಎಂದು ಡಿಎಂಕೆ ಸಚಿವ ಸೇಂಥಿಲ್ ಬಾಲಾಜಿ ಅವರು ಪ್ರಶ್ನಿಸಿದ್ದರು. ಅಲ್ಲದೆ, ವಾಚ್ ಖರೀದಿಯ ರಶೀದಿ ಪತ್ರಗಳನ್ನು ಬಹಿರಂಗಪಡಿಸಲು ಒತ್ತಾಯಿಸಿದ್ದರು. ಆದರೆ, ಇದೀಗ ತಮ್ಮ ವಾಚ್ನ ಬಗ್ಗೆ ಸಮರ್ಥನೆಗಿಳಿದಿರುವ ಅಣ್ಣಾಮಲೈ, ದೇಶಭಕ್ತಿಯ ಪ್ರತೀಕವಾಗಿ ಈ ವಾಚ್ ಧರಿಸಿಕೊಂಡಿರುವುದಾಗಿ ಹೇಳಿದ್ದಾರೆ.
ವಾಚ್ನ್ನು ರಫೇಲ್ ಮೆಟೀರಿಯಲ್ಗಳಿಂದ ಮಾಡಲಾಗಿದೆ. ರಫೇಲ್ ಜೆಟ್ ಹಾರಿಸಲು ನನ್ನಿಂದ ಸಾಧ್ಯವಾಗದು. ಹಾಗಾಗಿ ರಫೇಲ್ ಮೆಟೀರಿಯಲ್ಗಳಿಂದ ಮಾಡಿರುವ ವಾಚ್ ಧರಿಸಿದ್ದೇನೆ. ದೇಶಭಕ್ತಿಯ ಪ್ರತೀಕವಿದು. ನನ್ನ ಕೊನೆಯುಸಿರಿರುವರೆಗೂ ಈ ವಾಚ್ ನನ್ನ ಬಳಿ ಇರಲಿದೆ ಎಂದಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಆಗುವುದಕ್ಕಿಂತ ಮುನ್ನವೇ ಈ ವಾಚ್ ಖರೀದಿ ಮಾಡಿದ್ದೆ. ಅಲ್ಲದೆ ಖರೀದಿ ದಾಖಲೆಗಳನ್ನೂ ಬಿಡುಗಡೆಗೊಳಿಸಿದ್ದಾರೆ.