ನವದೆಹಲಿ ಡಿ 21 ( DaijiworldNews/MS): ಚೀನಾದಲ್ಲಿ ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಿದ ನಂತರ ಕೊರೊನಾ ಅಟ್ಟಹಾಸ ಮೆರೆದಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳುವುದಕ್ಕೆ ಇಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಹತ್ವದ ಸಭೆ ನಡೆಸಲಿದ್ದಾರೆ.
ಬೆಳಗ್ಗೆ 11 ಗಂಟೆಗೆ ನಡೆಯುವ ಸಭೆಯಲ್ಲಿ ಆರೋಗ್ಯ, ಫಾರ್ಮಾಸ್ಯುಟಿಕಲ್ಸ್, ಆಯುಷ್ ಇಲಾಖೆ, ಐಸಿಎಂಆರ್ ಪ್ರಧಾನ ನಿರ್ದೇಶಖ ರಾಜೀವ್ ಬಹ್ಲ್, ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್, ತಾಂತ್ರಿಕ ಸಲಹಾ ಗ್ರೂಪ್ನ ಅಧ್ಯಕ್ಷ ಎನ್.ಎಲ್. ಅರೋಹಾ ಭಾಗವಹಿಸಲಿದ್ದಾರೆ. ಮಾಸ್ಕ್ ಕಡ್ಡಾಯ ಸೇರಿದಂತೆ ಕೊರೊನಾ ಕಠಿಣ ನಿಯಮ ಜಾರಿ ಕುರಿತು ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ.
ಇದರೊಂದಿಗೆ ಕರೊನಾ ವೈರಸ್ ರೂಪಾಂತರಗಳನ್ನು ಪತ್ತೆ ಹಚ್ಚಲು ಪಾಸಿಟಿವ್ ಪ್ರಕರಣಗಳ ಮಾದರಿಯ ಜಿನೋಮ್ ಸೀಕ್ವೆನಿಂಗ್ (ಅನುಕ್ರಮ) ಹೆಚ್ಚಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದೆ.
ಕೊರೊನಾ ವೈರಸ್ ಹೊಸ ರೂಪಾಂತರಗಳನ್ನು ಗುರುತಿಸಿ ಟ್ರ್ಯಾಕ್ ಮಾಡಲು ಜೀನೋಮ್ ಸೀಕ್ವೆನಿಂಗ್ ನಿರ್ಣಾಯಕವಾಗಿದೆ. ಪ್ರಪಂಚದ ಹಲವು ದೇಶಗಳಲ್ಲಿ ಸೋಂಕಿನ ಏಕಾಏಕಿ ಹೆಚ್ಚಳದ ಹಿನ್ನೆಲೆಯಲ್ಲಿ ಹೊಸ ರೂಪಾಂತರಗಳನ್ನು ಸಮಯೋಚಿತವಾಗಿ ಪತ್ತೆ ಹಚ್ಚಲು ಜೀನೋಮ್ ಸೀಕ್ವೆನಿಂಗ್ ಹೆಚ್ಚಿಸುವುದು ಅಗತ್ಯವಾಗಿದೆ ಎಂದು ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ತಿಳಿಸಿದ್ದಾರೆ.