ತೆಲಂಗಾಣ, ಡಿ 20 (DaijiworldNews/HR): ಮಂಗಳವಾರ ಬೆಳಗ್ಗೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ 18 ವರ್ಷದ ಯುವತಿಯನ್ನು ಕಾರಿನಲ್ಲಿ ಬಂದ ನಾಲ್ವರ ತಂಡವು ಅಪಹರಿಸಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಸಂತ್ರಸ್ತ ಯುವತಿ ತಾನು ಕಿಡ್ನಾಪ್ ಆಗಿಲ್ಲ, ತನ್ನ ಇಚ್ಛೆಯಂತೆ ಪ್ರಿಯಕರ ಜ್ಞಾನೇಶ್ವರನೊಂದಿಗೆ ಮದುವೆಯಾಗಲು ಹೋಗಿದ್ದೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾಳೆ.
ಕಾಲೇಜು ವಿದ್ಯಾರ್ಥಿನಿಯಾಗಿರುವ ಶಾಲಿನಿ ತನ್ನ ತಂದೆಯ ಜೊತೆ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ನಾಲ್ವರ ತಂಡ ತಂದೆಗೆ ಹಲ್ಲೆ ನಡೆಸಿ ಯುವತಿಯನ್ನು ಅಪಹರಿಸಿದ್ದಾರೆ, ಯುವತಿಯ ಅಪಹರಣದ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದರಲ್ಲಿ ಯುವತಿ ಹಾಗೂ ಆಕೆಯ ತಂದೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಬಿಳಿ ಕಾರಿನಲ್ಲಿ ಬಂದ ನಾಲ್ವರ ತಂಡ ಯುವತಿಯನ್ನು ಬಲವಂತವಾಗಿ ಕಾರಿನಲ್ಲಿ ಕುಳ್ಳಿರಿಸಿ ಕರೆದೊಯ್ದಿದ್ದಾರೆ ಇದನ್ನು ತಪ್ಪಿಸಲು ಬಂದ ಯುವತಿಯ ತಂದೆಗೆ ತಂಡ ಹಲ್ಲೆ ನಡೆಸಿದ್ದು, ಕೂಡಲೇ ಯುವತಿಯ ತಂದೆ ಹತ್ತಿರದ ಪೊಲೀಸ್ ಠಾಣೆಗೆ ಮಗಳನ್ನು ಅಪಹರಿಸಿದ ಕುರಿತು ದೂರು ನೀಡಿದ್ದಾರೆ.
ಇದೀಗ ಪೊಲೀಸರು ಆಕೆಗಾಗಿ ಹುಡುಕಾಟ ಆರಂಭಿಸಿರುವಾಗಲೇ ಶಾಲಿನಿ ವಿಡಿಯೋ ಬಿಡುಗಡೆ ಮಾಡಿದ್ದು, ಅದರಲ್ಲಿ ನಾನು ಮತ್ತು ಜ್ಞಾನೇಶ್ವರ್ ಅಲಿಯಾಸ್ ಜಾನಿ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ನನ್ನ ಒಪ್ಪಿಗೆಯ ಮೇರೆಗೆ ನನ್ನನ್ನು ಕರೆದುಕೊಂಡು ಹೋಗಲು ಜಾನಿ ದೇವಸ್ಥಾನಕ್ಕೆ ಬಂದಿದ್ದ. ಜಾನಿ ಮುಖವನ್ನು ಮುಚ್ಚಿಕೊಂಡಿದ್ದರಿಂದ ಆರಂಭದಲ್ಲಿ ನಾನು ಗೊಂದಲಕ್ಕೊಳಗಾಗಿದ್ದೆ ಎಂದಿದ್ದಾಳೆ.
ಶಾಲಿನಿ ವಿಡಿಯೋ ಬಿಡುಗಡೆ ಮಾಡುವ ಮುನ್ನ ಜಿಲ್ಲೆಗೆ ಬಂದಿದ್ದ ಐಟಿ ಸಚಿವ ಕೆ.ಟಿ.ರಾಮರಾವ್ ಅವರು ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಹೆಗ್ಡೆ ಅವರನ್ನು ಕರೆಸಿ ಘಟನೆಯ ಕುರಿತು ವಿಚಾರಿಸಿದ್ದು, ಸಂಜೆಯೊಳಗೆ ಅಪಹರಣಕಾರರನ್ನು ಬಂಧಿಸುವಂತೆ ಸೂಚನೆ ನೀಡಿದ್ದರು.