ಜೈಪುರ, ಡಿ 20 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರೇ ನಿಮ್ಮ ಸ್ನೇಹಿತರಿಗೆ ಡ್ರೈ ಫ್ರೂಟ್ಸ್ ತಿನ್ನಿಸುವುದನ್ನು ನಿಲ್ಲಿಸಿ ಜನರಿಗಾಗಿ ಕೆಲಸ ಮಾಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲಹೆ ಮಾಡಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ನ್ನು 500 ರೂ.ಗಳಿಗೆ ಜನರಿಗೆ ಒದಗಿಸುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಮಂಗಳವಾರ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರ 500 ರೂ.ಗಳಿಗೆ ಜನರಿಗೆ ಅಡುಗೆಗೆ ಸಿಲಿಂಡರ್ ನೀಡುವ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ನೀಡುವುದಕ್ಕಿಂತ ಅರ್ಧಕ್ಕರ್ಧ ಬೆಲೆಗೆ ರಾಜ್ಯ ನೀಡಲಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ನೇಹಿತರಿಗೆ ಡ್ರೈ ಫ್ರೂಟ್ಸ್ ತಿನ್ನಿಸುತ್ತಿದ್ದಾರೆ. ಇದನ್ನು ನಿಲ್ಲಿಸಿ ಅವರು ಹಣದುಬ್ಬರದಿಂದ ಸಂಕಷ್ಟಕ್ಕೊಳಗಾಗಿರುವ ಜನರಿಗಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಕುಟುಕಿದ್ದಾರೆ.
ರಾಜಸ್ಥಾನದ ಅಲ್ವಾರ್ನಲ್ಲಿ ಸೋಮವಾರ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅಶೋಕ್ ಗೆಹ್ಲೋಟ್, 1050ಕ್ಕೆ ಸಿಗುವ ಅಡುಗೆ ಅನಿಲ ಸಿಲಿಂಡರ್ಗಳನ್ನು 500 ರೂ.ಗಳಿಗೆ ನೀಡುವುದಾಗಿ ಘೋಷಿಸಿದ್ದರು. ಅಲ್ಲದೆ, ಮುಂದಿನ ಎಪ್ರಿಲ್ನಿಂದ ಈ ಯೋಜನೆ ಜಾರಿಗೆ ಬರಲಿದ್ದು, ವಾರ್ಷಿಕ 12 ಸಿಲಿಂಡರ್ ಈ ಬೆಲೆಗೆ ಸಿಗಲಿದೆ ಎಂದಿದ್ದರು.