ನವದೆಹಲಿ, ಡಿ 20 (DaijiworldNews/DB): ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಐಪಿಎಸ್ ಅಧಿಕಾರಿ ಎಂದು ನಂಬಿಸಿ ದೆಹಲಿ ಮೂಲದ ವೈದ್ಯೆಯೊಬ್ಬರಿಗೆ ವ್ಯಕ್ತಿಯೊಬ್ಬ ವಂಚಿಸಿದ ಘಟನೆ ನಡೆದಿದೆ. ಇದೀಗ ವಂಚಕನನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶ ಗ್ವಾಲಿಯರ್ ನಿವಾಸಿ ವಿಕಾಸ್ ಗೌತಮ್ ವಂಚಿಸಿ ಬಂಧಿಸಲ್ಪಟ್ಟಾತ. ಕೇವಲ ಎಂಟನೇ ತರಗತಿ ಉತ್ತೀರ್ಣನಾಗಿದ್ದ ಆತ ಕಾನ್ಪುರ್ ಐಐಟಿ ಪದವೀಧರ ಹಾಗೂ ಉತ್ತರಪ್ರದೇಶ ಕೇಡರ್ನ ಐಪಿಎಸ್ ಅಧಿಕಾರಿ ತಾನು ಎಂದು ಹೇಳಿಕೊಂಡು ದೆಹಲಿಯ ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯೆಯೊಬ್ಬರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ ಆರಂಭಿಸಿದ್ದ. ಬಳಿಕ ಆಕೆಯ ನಂಬಿಕೆ ಗಿಟ್ಟಿಸಿಕೊಂಡು ಆಕೆಯಿಂದ ವಿವರಗಳನ್ನು ತೆಗೆದುಕೊಂಡು ಬ್ಯಾಂಕ್ ಖಾತೆಯಿಂದ 25 ಸಾವಿರ ರೂ. ಎಗರಿಸಿದ್ದಾನೆ. ಈ ವಿಚಾರ ಗೊತ್ತಾದ ಬಳಿಕ ಆತ ವಂಚಕನೆಂಬದು ವೈದ್ಯೆಗೆ ಗೊತ್ತಾಗಿದ್ದು, ಆಕೆ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದಳು. ಈ ವೇಳೆ ಆತ ತನಗೆ ರಾಜಕೀಯ ಸಂಪರ್ಕವಿದೆ ಎಂದು ಬೆದರಿಕೆ ಹಾಕಿದ್ದಾನೆ. ಆದರೆ ವೈದ್ಯೆ ಇದಕ್ಕೆ ಹೆದರದೆ ದೂರು ನೀಡಿದ್ದು, ಇದೀಗ ದೆಹಲಿ ಸೈಬರ್ ಸೆಲ್ ಅಧಿಕಾರಿಗಳು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ನನ್ನು ತಾನು ಐಪಿಎಸ್ ಅಧಿಕಾರಿ ಎಂದು ಬಿಂಬಿಸಿಕೊಳ್ಳಲು ಈತ ನಕಲಿ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂ ಖಾತೆಗಳನ್ನು ತೆರೆದಿದ್ದ. ಎಂಟನೇ ತರಗತಿ ಉತ್ತೀರ್ಣನಾದ ಬಳಿಕ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವೆಲ್ಡಿಂಗ್ ಕೋರ್ಸ್ ಮಾಡಿ ದೆಹಲಿಗೆ ಬಂದು ಮುಖರ್ಜಿ ನಗರದ ಹೊಟೇಲ್ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಆ ಬಳಿಕ ಹೊಟೇಲ್ಗೆ ಬರುತ್ತಿದ್ದ ಅಧಿಕಾರಿಗಳನ್ನು ನೋಡಿ ತಾನೂ ಅವರಂತೆ ಇರಬೇಕೆಂದು ಪ್ಲಾನ್ ರೂಪಿಸಿ ಐಪಿಎಸ್ ಅಧಿಕಾರಿಯೆಂಬಂತೆ ಬಿಂಬಿಸಿಕೊಂಡು ಪೋಸು ಕೊಡುತ್ತಿದ್ದ ಎಂದು ದೆಹಲಿ ಪೊಲೀಸ್ ಅಧಿಕಾರಿ ಹರಿಂದರ್ ಸಿಂಗ್ ಹೇಳಿದ್ದಾರೆ.