ನವದೆಹಲಿ, ಡಿ 20 ( DaijiworldNews/MS): ಕಾಂಗ್ರೆಸ್ ದೇಶಕ್ಕಾಗಿ , ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿದ್ದು ಸಹಾಯ ಮಾಡಿದೆ ನಮ್ಮ ನಾಯಕರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಬಿಜೆಪಿ ನಾಯಕರು ದೇಶಕ್ಕಾಗಿ ಒಂದು "ನಾಯಿಯನ್ನು ಸಹ ಕಳೆದುಕೊಂಡಿಲ್ಲ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆ ಸಂಸತ್ತಿನಲ್ಲಿ ಮಂಗಳವಾರ ತೀವ್ರ ಕೋಲಹಲ ಸೃಷ್ಟಿಸಿದ್ದು,ಈ ಬಗ್ಗೆ ಉಪ ರಾಷ್ಟ್ರಪತಿ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರು ಸದನದಲ್ಲಿ ಗದ್ದಲದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
"ದೇಶದ 135 ಕೋಟಿ ಜನರು ನಮ್ಮನ್ನು ಗಮನಿಸುತ್ತಿದ್ದಾರೆ. ಯಾರೋ ಹೊರಗೆ ಏನೋ ಹೇಳಿರಬಹುದು. ಆದರೆ ಗದ್ದಲವನ್ನು ಸೃಷ್ಟಿಸುವ ಮೂಲಕ, ನಾವು ತುಂಬಾ ತಪ್ಪಾದ ಉದಾಹರಣೆಯನ್ನು ಇಡುತ್ತಿದ್ದೇವೆ . ನೀವು ಮಕ್ಕಳಲ್ಲ" ಎಂದು ಬೇಸರ ವ್ಯಕ್ತಪಡಿಸಿದರು.
"ಸದನದ ಹೊರಗಿನ ಜನರು ನಮ್ಮನ್ನು ನೋಡಿ ನಗುತ್ತಿದ್ದಾರೆ. ಇದು ತುಂಬಾ ತಪ್ಪು ಮತ್ತು ಇದು ಸಂಸತ್ತಿನ ವರ್ಚಸ್ಸಿಗೆ ಮಸಿ ಬಳಿಯುತ್ತದೆ. . ಇದು ಎಂತಹ ನೋವಿನ ದೃಶ್ಯವಾಗಿದೆ. ನನ್ನನ್ನು ನಂಬಿ, 135 ಕೋಟಿ ಜನರು ನಮ್ಮನ್ನು ನೋಡಿ ನಗುತ್ತಿದ್ದಾರೆ. ನಾವು ಯಾವ ಮಟ್ಟಕ್ಕೆ ಇಳಿದಿದ್ದೇವೆ ಎಂದು ಅವರು ಯೋಚಿಸುತ್ತಿರಬೇಕು" ಎಂದು ಅಸಮಾಧಾನಗೊಂಡರು.
ರಾಜಸ್ಥಾನದ ಅಲ್ವಾರ್ನಲ್ಲಿ ಭಾರತ್ ಜೋಡೋ ಯಾತ್ರೆಯ ಭಾಗವಾಗಿ ನಡೆದ ರ್ಯಾಲಿಯಲ್ಲಿ ಮಾತನಾಡಿದ್ದ ಖರ್ಗೆ ಅವರು, ಈ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಇಂದು ಸಂಸತ್ತಿನಲ್ಲಿ ಉಭಯ ಸದನಗಳಲ್ಲಿ ಪ್ರಸ್ತಾಪಿಸಿದ ಬಿಜೆಪಿ ನಾಯಕರು ಖರ್ಗೆ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದು ಸದನದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿತ್ತು.