ನವದೆಹಲಿ, ಡಿ 20 (DaijiworldNews/DB): ಥಳುಕು-ಬಳುಕು ತೋರಿಸಲಷ್ಟೇ ಸ್ಮೃತಿ ಇರಾನಿ ಬಂದಿದ್ದಾರೆ ಎಂದ ಕಾಂಗ್ರೆಸ್ ನಾಯಕ ಅಜಯ್ ರೈ ವಿರುದ್ದ ಸ್ವತಃ ಸ್ಮೃತಿ ಇರಾನಿ ಕೆಂಡಾಮಂಡಲರಾಗಿದ್ದಾರೆ. ಇವರು ಸ್ತ್ರೀ ದ್ವೇಷಿ ಗೂಂಡಾಗಳು ಎಂದು ಸ್ಮೃತಿ ಹರಿಹಾಯ್ದಿದ್ದಾರೆ.
ಕೇಂದ್ರ ಸಚಿವೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಅಜಯ್ ಕ್ಷಮೆ ಯಾಚಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ. ಕಾಂಗ್ರೆಸ್ನ ತತ್ವ, ಸಿದ್ಧಾಂತ ಹೇಳಿಕೆಗಳೆಲ್ಲ ಮಹಿಳಾ ವಿರೋಧಿಯಾಗಿಯೇ ಇರುತ್ತವೆ ಎಂದು ವಕ್ತಾರರಾದ ಅನಿಲಾ ಸಿಂಗ್, ಆನಂದ್ ದುಬೆ ಆರೋಪಿಸಿದ್ದಾರೆ. ಕೇಂದ್ರ ಮಾಜಿ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಕೇಂದ್ರ ಸಚಿವ ರಾಮದಾಸ್ ಅಠಾವಳೆ ಸೇರಿದಂತೆ ಹಲವರು ಅಜಯ್ ರೈ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಆದರೆ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವುದಿಲ್ಲ ಎಂದು ಅಜಯ್ ರೈ ಪಟ್ಟು ಹಿಡಿದಿದ್ದಾರೆ.
ಏನಿದು ವಿವಾದ?
ಹಿಂದೆ ಸ್ಮೃತಿ ಇರಾನಿ ವಿರುದ್ದ ಅಮೇಠಿಯಲ್ಲಿ ಸೋತ ರಾಹುಲ್ ಗಾಂಧಿಯವರು ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಜಯ್ ರೈ, ಅಮೇಠಿ ಗಾಂಧಿ ಕುಟುಂಬಕ್ಕೆ ಸೇರಿದ ಕ್ಷೇತ್ರ. ಅಲ್ಲಿ ರಾಹುಲ್ ಗಾಂಧಿಯವರು ಗೆದ್ದು ಸಂಸದರಾಗಿದ್ದರು. ರಾಜೀವ್ ಗಾಂಧಿ, ಸಂಜಯ್ ಗಾಂಧಿಯವರೂ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಸ್ಮೃತಿ ಇರಾನಿಯವರಲ್ಲಿ ಆ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ? ಕಾರ್ಖಾನೆಗಳು ಮುಚ್ಚುವ ಹಂತಕ್ಕೆ ಬಂದಿದೆ. ಅವರು ಬಂದಿರುವುದೇ ಥಳುಕು-ಬಳುಕು-ವಯ್ಯಾರ ಮಾಡಲಷ್ಟೇ ಹೊರತು ಅಭಿವೃದ್ದಿ ಮಾಡಲು ಅಲ್ಲ ಎಂದಿದ್ದರು.
ಇನ್ನು ಅಜಯ್ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ, ರಾಹುಲ್ ಗಾಂಧಿಯವರೇ ಮುಂಬರುವ ಚುನಾವಣೆಗೆ ಅಮೇಠಿಯಿಂದ ನೀವು ಸ್ಪರ್ಧೆಗಿಳಿಯುತ್ತೀರಿ ಎಂಬುದನ್ನು ನಿಮ್ಮ ಪಕ್ಷದ ನಾಯಕನ ಬಾಯಿಯಿಂದ ಅಸಭ್ಯವಾಗಿ ಹೇಳಿಸಿದ್ದೀರಿ. ನೀವು ಅಮೇಠಿಯಿಂದ ಮಾತ್ರವೇ ಸ್ಪರ್ಧಿಸುವುದಾ ಅಥವಾ ಭಯದಿಂದ ಇನ್ನೊಂದು ಕ್ಷೇತ್ರವನ್ನೂ ಆಯ್ಕೆ ಮಾಡಿಕೊಳ್ಳುತ್ತೀರಾ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ಪಕ್ಷದಲ್ಲಿರುವ ಸ್ತ್ರೀದ್ವೇಷಿ ಗೂಂಡಾಗಳಿಗೆ ಭಾಷಣ ಬರೆದುಕೊಡಲು ಹೊಸ ವ್ಯಕ್ತಿಯನ್ನು ನೇಮಕ ಮಾಡುವ ಕೆಲಸವನ್ನೂ ನೀವು ಮಾಡಬೇಕು ಎಂದು ಸೂಚ್ಯವಾಗಿ ಇದೇ ವೇಳೆ ಸ್ಮೃತಿ ಹೇಳಿದರು.