ಉತ್ತರಪ್ರದೇಶ, ಡಿ 20 (DaijiworldNews/HR): ನಿವೃತ್ತ ಪೊಲೀಸ್ ಸಬ್ಇನ್ಸ್ಪೆಕ್ಟರ್ಗೆ ಪಿಂಚಣಿ ನೀಡಲು ಸಹಾಯ ಮಾಡುವ ನೆಪದಲ್ಲಿ ಸರ್ಕಾರದ ಖಜಾನೆ ಅಧಿಕಾರಿ ಎಂದು ಹೇಳಿಕೊಂಡು ಸೈಬರ್ ದರೋಡೆಕೋರನೊಬ್ಬ 8.50 ಲಕ್ಷ ರೂ. ದೋಚಿರುವ ಘಟನೆ ನಡೆದಿದೆ.
ಈ ಬಗ್ಗೆ ಉತ್ತರಪ್ರದೇಶದ ನೋಯ್ಡಾದ ಸೆಕ್ಟರ್ 36ರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿಎಫ್ಐಆರ್ ದಾಖಲಿಸಿದ್ದು ಪೊಲೀಸರು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದಾರೆ.
ನಿವೃತ್ತ ಪೊಲೀಸ್ ಸಬ್ಇನ್ಸ್ಪೆಕ್ಟರ್ಗೆ ಅಪರಿಚಿತ ಸಂಖ್ಯೆಯಿಂದ ಕರೆ ಬಂದಿದ್ದು, ಆ ವ್ಯಕ್ತಿ ತನ್ನನ್ನು ಸಹರಾನ್ಪುರದ ಖಜಾನೆ ಅಧಿಕಾರಿ ಎಂದು ಹೇಳಿಕೊಂಡಿದ್ದ. ನಿಮ್ಮ ಪಿಂಚಣಿಯನ್ನು ಸಹರಾನ್ಪುರಕ್ಕೆ ವರ್ಗಾಯಿಸಲು ನೀವು ಅರ್ಜಿ ಸಲ್ಲಿಸಿದ್ದೀರಿ ಎಂದಿದ್ದ. ಈ ವೇಳೆ ನನ್ನ ವೃತ್ತಿಪರ ದಾಖಲೆಗಳ ಬಗ್ಗೆ ಸಾಕಷ್ಟು ವಿವರಗಳನ್ನು ಹಂಚಿಕೊಂಡಿರುವುದಾಗಿ ಬಿಜೇಂದ್ರ ಸಿಂಗ್ ಮಲಿಕ್ ಅವರು ದೂರಿನಲ್ಲಿ ಹೇಳಿದ್ದಾರೆ.
ಕರೆ ಮಾಡಿದ ವ್ಯಕ್ತಿಯು ನನ್ನ ಪಿಂಚಣಿಯ ಫೈಲ್ ಅನ್ನು ಸಿದ್ಧಪಡಿಸುತ್ತಿದ್ದೇನೆ ಅದನ್ನು ಪೂರ್ಣಗೊಳಿಸಲು ನನ್ನ ಫೋನ್ ಸಂಖ್ಯೆಗೆ ಒಟಿಪಿ ಕಳುಹಿಸುತ್ತೇನೆ, ನಾನು ಅದನ್ನು ಅವನೊಂದಿಗೆ ಹಂಚಿಕೊಳ್ಳಬೇಕು ಎಂದು ಹೇಳಿದ್ದ. ಅವರು ಫೋನ್ ಮೂಲಕ ಕೇಳಿದ ಒಟಿಪಿ ಮತ್ತು ಇತರ ಕೆಲವು ವಿವರಗಳನ್ನು ನಾನು ತಿಳಿಸಿದ್ದೆ. ಸ್ವಲ್ಪ ಸಮಯದ ನಂತರ ನನ್ನ ಖಾತೆಯಿಂದ ಎರಡು ಕಂತುಗಳಲ್ಲಿ 8.62 ಲಕ್ಷ ರೂಪಾಯಿ ಹಿಂಪಡೆಯಲಾಗಿದೆ ಎಂದು ನನಗೆ ಸೂಚನೆ ಬಂದಿತು ಎಂದು ನಿವೃತ್ತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.