ನವದೆಹಲಿ, ಡಿ 20 (DaijiworldNews/DB): ರೈಲ್ವೇ ಇಲಾಖೆಯಲ್ಲಿ ಉತ್ತಮ ಸಂಬಳದ ಹುದ್ದೆ ನೀಡಲಾಗುವುದು ಎಂದು ಆಮಿಷವೊಡ್ಡಿ ವಂಚಕರ ಗುಂಪೊಂದು ಎಂಜಿನಿಯರಿಂಗ್, ತಾಂತ್ರಿಕ ಪದವೀಧರರು ಸಹಿತ 28 ಮಂದಿಗೆ ಒಟ್ಟು 2.67 ಕೋಟಿ ರೂ.ಗಳನ್ನು ವಂಚಿಸಿದ ಘಟನೆ ನಡೆದಿದೆ.
ತಮಿಳುನಾಡು ಮೂಲದ ಕನಿಷ್ಠ 28 ಮಂದಿಗೆ ಪ್ರಯಾಣ ಚೀಟಿ ತಪಾಸಣಾ ಹುದ್ದೆ, ಸಂಚಾರ ಸಹಾಯಕ ಹುದ್ದೆ, ಗುಮಾಸ್ತ ಹುದ್ದೆಗಳ ತರಬೇತಿ ನೀಡಿ ಉತ್ತಮ ಹುದ್ದೆಯ ಆಮಿಷವೊಡ್ಡಿ ದೆಹಲಿಯ ವಿವಿಧ ಫ್ಲಾಟ್ಫಾರ್ಮ್ಗಳಲ್ಲಿ ರೈಲುಗಳ ಆಗಮನ ಮತ್ತು ನಿರ್ಗಮನವನ್ನು ಎಣಿಸುತ್ತಾ ರಾತ್ರಿ-ಹಗಲು ಪಾಳಿಯಲ್ಲಿ ಕುಳಿತುಕೊಳ್ಳುವ ಕೆಲಸ ನೀಡಲಾಗಿದೆ. ಆದರೆ ಇವರೆಲ್ಲರ ಕೈಯಿಂದ 2 ಲಕ್ಷ ರೂ.ಗಳಿಂದ 24 ಲಕ್ಷ ರೂ.ಗಳವರೆಗೆ ಲಂಚ ವಸೂಲಿ ಮಾಡಲಾಗಿದೆ ಎಂದು ನೊಂದ ಉದ್ಯೋಗಾಕಾಂಕ್ಷಿ 78 ವರ್ಷದ ಎಂ. ಸುಬ್ಬುಸಾಮಿ ದೆಹಲಿ ಆರ್ಥಿಕ ಅಪರಾಧಗಳ ಪೊಲೀಸ್ ದಳಕ್ಕೆ ದೂರು ನೀಡಿದ್ದಾರೆ.
ಮಾಜಿ ಸೈನಿಕನಾದ ನಾನೇ ಎಲ್ಲಾ ಉದ್ಯೋಗಾಕಾಂಕ್ಷಿಗಳನ್ನು ವಂಚಕರ ಗುಂಪಿಗೆ ಪರಿಚಯಿಸಿದೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸಿಕೊಡುವ ಕೆಲಸದಲ್ಲಿ ನಾನು ತೊಡಗಿಸಿಕೊಂಡಿದ್ದೆ. ಆದರೆ ಅದೊಂದು ದೊಡ್ಡ ಹಗರಣ ಎಂದು ತಿಳಿಯದೆ ಅವರ ವಂಚನೆ ಜಾಲಕ್ಕೆ ನಾನೂ ಸಹಿತ ಎಲ್ಲರೂ ಬೀಳುವಂತಾಗಿದೆ ಎಂದು ಸುಬ್ಬುಸಾಮಿ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
ಉದ್ಯೋಗಾಕಾಂಕ್ಷಿಗಳು ಸುಬ್ಬುಸಾಮಿಯವರಿಗೆ 2 ಲಕ್ಷ ರೂ.ಗಳಿಂದ 24 ಲಕ್ಷ ರೂ.ಗಳವರೆಗಿನ ಮೊತ್ತವನ್ನು ನೀಡಿದ್ದು, ಅದನ್ನು ಸುಬ್ಬುಸಾಮಿ ಅವರು ಉತ್ತರ ರೈಲ್ವೆ ವಲಯ ಕಚೇರಿಯ ಉಪ ನಿರ್ದೇಶಕ ಎಂದು ಪರಿಚಯಿಸಿಕೊಂಡ ವಿಕಾಸ್ ರಾಣಾ ಎಂಬ ವ್ಯಕ್ತಿಗೆ ನೀಡಿದ್ದರು ಎಂದು ಸಂತ್ರಸ್ತ ಉದ್ಯೋಗಾಕಾಂಕ್ಷಿ ಸೆಂಥಿಲ್ ಕುಮಾರ್ ತಿಳಿಸಿದ್ದಾರೆ.