ಮೈಸೂರು, ಡಿ 20 (DaijiworldNews/HR): ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ವೀರಪ್ಪನ್ ಸಹಚರ ಜ್ಞಾನಪ್ರಕಾಶ್ ಅವರು ಮೈಸೂರು ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡಿದ್ದು, ಜೈಲಿನಿಂದ ತಮ್ಮ ವಸ್ತುಗಳು ಹಾಗೂ ಹಲಸಿನ ಸಸಿಯೊಂದಿಗೆ ಆಚೆ ಬಂದಿರುವ ಘಟನೆ ನಡೆದಿದೆ.
ಜ್ಞಾನಪ್ರಕಾಶ್ ಅವರು ಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರಿಗೆ ಸುಪ್ರೀಂ ಕೋರ್ಟ್ ಮಾನವೀಯತೆ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದ್ದು, ಸೋಮವಾರ ಇಬ್ಬರಿಂದ ಶ್ಯೂರಿಟಿ ಹಾಗೂ 5 ಲಕ್ಷದ ಬಾಂಡ್ ಅನ್ನು ನ್ಯಾಯಾಲಯವು ಪಡೆದಿತ್ತು. ನಂತರ ಕೇಂದ್ರ ಕಾರಾಗೃಹದ ಮುಖ್ಯ ಸೂಪರಿಂಟೆಂಡೆಟ್ ಅವರಿಗೆ ಜ್ಞಾನ ಪ್ರಕಾಶ್ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ ಆದೇಶ ನೀಡಿತ್ತು.
ಇನ್ನು ಜೈಲಿನಿಂದ ತಮ್ಮ ವಸ್ತುಗಳು ಹಾಗೂ ಹಲಸಿನ ಸಸಿಯೊಂದಿಗೆ ಆಚೆ ಬಂದ ಜ್ಞಾನಪ್ರಕಾಶ್ ಅವರನ್ನು ನೋಡಿದ ಸೋದರರಾದ ಆಂಥೋಣಿ, ಥಾಮಸ್ ಸೇರಿದಂತೆ ಸಂಬಂಧಿಗಳು ಭಾವುಕರಾಗಿದ್ದಾರೆ.
ಜ್ಞಾನಪ್ರಕಾಶ್ ಅವರು 1993ರ ಪಾಲಾರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ವೀರಪ್ಪನ್, ಸೈಮನ್, ಬಿಲವೇಂದ್ರನ್, ಮೀಸೆಕಾರ ಮಾದಯ್ಯ ಜೊತೆಗೆ ಭಾಗಿಯಾಗಿದ್ದರು ಎಂದು ಟಾಡಾ ಕಾಯ್ದೆಯಡಿ ಮೈಸೂರಿನ ಟಾಡಾ ನ್ಯಾಯಾಲಯವು 1997ರಲ್ಲಿ ಗಲ್ಲು ಶಿಕ್ಷೆ ವಿಧಿಸಿತ್ತು.
ಇನ್ನು ವೀರಪ್ಪನ್ 2004ರ ಅ.18ರಂದು ಎನ್ ಕೌಂಟರ್ ನಲ್ಲಿ ಮೃತಪಟ್ಟರೆ, ಜೈಲಿನಲ್ಲಿ ಶಿಕ್ಷೆ ಅನಭವಿಸುತ್ತಿದ್ದ ಸೈಮನ್, ಬಿಲವೇಂದ್ರನ್ ಕೆಲವು ವರ್ಷಗಳ ಹಿಂದೆಯೇ ನಿಧನರಾಗಿದ್ದಾರೆ. ಮೀಸೆಕಾರ ಮಾದಯ್ಯ ಹಾಗೂ ಜ್ಞಾನಪ್ರಕಾಶ್ ಮಾತ್ರ ಇದ್ದಾರೆ.