ಬೆಂಗಳೂರು, ಡಿ 20 ( DaijiworldNews/MS): "ಮಿಸ್ಟರ್ ಸಂತೋಷ್, ಕರ್ನಾಟಕಕ್ಕೂ ನಿನಗೂ ಏನ್ ಸಂಬಂಧ, ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು?" ಎಂದು ಪ್ರಶ್ನಿಸಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಕಿಡಿಕಾರಿದ್ದಾರೆ.
"ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡರ ಕುಟುಂಬ, ಜೆಡಿಎಸ್ ಹಾಗೂ ಪಂಚರತ್ನ ಯೋಜನೆಗಳ ಬಗ್ಗೆ ಬಿ.ಎಲ್.ಸಂತೋಷ್ ನೀಡಿರುವ ಹೇಳಿಕೆ ಬಗ್ಗೆ ಸಿಡಿಮಿಡಿಗೊಂಡಿರುವ ಕುಮಾರಸ್ವಾಮಿ " ಅವನ್ಯಾರೋ ಜೋಳಿಗೆ ಹಿಡಿದುಕೊಂಡು ಓಡಾಡೋನು ಏನೋ ಹೇಳಿದ್ದಾನಲ್ಲಾ ,ಅವನಿಗೂ ಕರ್ನಾಟಕಕ್ಕೂ ನಿನಗೂ ಏನ್ ಸಂಬಂಧ ಇದೆ. ಲೂಟಿ, ದರೋಡೆ ಮಾಡಿ ಕರ್ನಾಟಕದ ಹಣವನ್ನು ಕೊಂಡೊಯ್ದಿದ್ದೀರಿ" ಎಂದು ಆರೋಪಿಸಿದ್ದಾರೆ.
"ನಿಮ್ಮದು 40 ಪರ್ಸೆಂಟ್ ಸರ್ಕಾರ. ನಮ್ಮ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಮೋದಿ ಹೆಸರಿನಲ್ಲಿ ಹೊಟ್ಟೆಪಾಡು ನೋಡ್ಕೊಂಡಿರೋರು ನೀವು. ಪ್ರಧಾನಿ ಅವರ ಬಳಿ ನಮ್ಮ ಕುಟುಂಬ ಬಗ್ಗೆ ಕೇಳಿ. ಲಘುವಾಗಿ ನಮ್ಮ ಪಕ್ಷದ ಬಗ್ಗೆ ಮಾತನಾಡಬೇಡಿ. 2023ಕ್ಕೆ ನಿಮ್ಮ ಪರಿಸ್ಥಿತಿ ಏನಾಗಿರುತ್ತದೆ ಎನ್ನುವುದನ್ನು ಒಮ್ಮೆ ಊಹೆ ಮಾಡಿಕೊಳ್ಳಿ" ಎಂದು ಸವಾಲು ಹಾಕಿದ್ದಾರೆ.