ಗೋರಖ್ಪುರ, ಡಿ 20 (DaijiworldNews/DB): ಕಾಕೋರಿ ಘಟನೆಯ ತ್ಯಾಗದ ಸ್ಮರಣಾರ್ಥ ಉತ್ತರ ಪ್ರದೇಶ ಸರ್ಕಾರದ ವತಿಯಿಂದ ದೇಶದ ಮೊದಲ ಡ್ರೋನ್ ಪ್ರದರ್ಶನ ಸೋಮವಾರ ಸಂಜೆ ಗೋರಖ್ಪುರದಲ್ಲಿ ನಡೆಯಿತು. 750 ಡ್ರೋನ್ಗಳ ಪ್ರದರ್ಶನ ಆಕರ್ಷಕವಾಗಿತ್ತು.
ಗೋರಖ್ಪುರದ ಮಹಾಂತ್ ದಿಗ್ವಿಜಯ್ನಾಥ್ ಉದ್ಯಾನವನದಲ್ಲಿ ನಡೆದ ಡ್ರೋನ್ ಪ್ರದರ್ಶನದಲ್ಲಿ ಕ್ರಾಂತಿಕಾರಿಗಳ ಚಿತ್ರಗಳನ್ನು ದೀಪಗಳ ಮೂಲಕ ಪ್ರದರ್ಶಿಸಲಾಯಿತು. ಅಮರ್ ಶಹೀದ್ ಬಂಧು ಸಿಂಗ್, ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ಠಾಕೂರ್ ರೋಷನ್ ಸಿಂಗ್ ಅವರಂತಹ ಕ್ರಾಂತಿಕಾರಿಗಳ ಚಿತ್ರಗಳನ್ನು ದೀಪಗಳಲ್ಲಿ ವೀಕ್ಷಿಸಿದ ಜನರು ಹರ್ಷೋದ್ಗಾರ ಕೂಗಿದರು.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಉಪಸ್ಥಿತರಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕಾಕೋರಿ ರೈಲು ಘಟನೆ ನಡೆದಿದ್ದು, ಅದರಲ್ಲಿ ಹುತಾತ್ಮರಾದ ಕ್ರಾಂತಿಕಾರಿಗಳ ನೆನಪಿಗಾಗಿ ಡಿಸೆಂಬರ್ 15ರಿಂದ 19ರವರೆಗೆ ಕಾಕೋರಿ ತ್ಯಾಗ ದಿನ ನಡೆಯುತ್ತದೆ.