ನವದೆಹಲಿ, ಡಿ 19 (DaijiworldNews/DB): ಭಾರತೀಯ ಸೇನೆಯನ್ನು ರಾಹುಲ್ ಗಾಂಧಿಯವರ ಆದೇಶದ ಮೇಲೆ ನಿಯೋಜನೆ ಮಾಡಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಭಾರತ-ಚೀನಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತಿರುಗೇಟು ನೀಡಿರುವ ಅವರು, ಎಲ್ಎಸಿಯಲ್ಲಿ ಏಕಪಕ್ಷೀಯ ಬದಲಾವಣೆ ಎದುರಿಸುವ ನಿಟ್ಟಿನಲ್ಲಿ ಸೇನೆ ನಿಯೋಜನೆ ಮಾಡಲಾಗುತ್ತಿದೆ. 2020 ರಿಂದ ಬೃಹತ್ ಪ್ರಮಾಣದಲ್ಲೇ ಚೀನಾವು ಸೈನ್ಯದ ನಿಯೋಜನೆ ಹೆಚ್ಚಿಸಿದೆ. ಆ ಸೇನೆಯನ್ನು ಎದುರಿಸಲು ಅತಿದೊಡ್ಡ ಎಲ್ಎಸಿ ನಿಯೋಜನೆ ಅಗತ್ಯವೂ ಆಗಿದೆ. ರಾಹುಲ್ ಗಾಂಧಿಯವರ ಆದೇಶದ ಮೇಲೆ ಭಾರತೀಯ ಸೈನಿಕರು ಗಡಿ ನಿಯಂತ್ರಣ ರೇಖೆಗೆ ಹೋಗುವುದಿಲ್ಲ. ಪ್ರಧಾನಿ ಆದೇಶದ ಮೇರೆಗೆ ನಿಯೋಜನೆ ಮಾಡಲಾಗುತ್ತದೆ ಎಂದರು.
ಚೀನಾ ಸೈನಿಕರು ಬಳಸುತ್ತಿರುವ ಅಸ್ತ್ರ ನೋಡಿದರೆ ಯುದ್ದಕ್ಕೆ ತಯಾರಾಗುವಂತಿದೆ. ಆದರೆ ಕೇಂದ್ರ ಸರ್ಕಾರ ಇನ್ನೂ ನಿದ್ರೆಯಿಂದ ಎಚ್ಚೆತ್ತುಕೊಂಡಿಲ್ಲ ಮತ್ತು ಇದನ್ನು ಅವರು ಒಪ್ಪಿಕೊಳ್ಳುತ್ತಿಲ್ಲ ಎಂದು ರಾಹುಲ್ ಗಾಂಧಿ ಆರೋಪಿಸಿದ್ದರು.
10 ದಿನಗಳ ಹಿಂದಷ್ಟೇ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಘರ್ಷಣೆಯನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಈ ಆರೋಪ ಮಾಡಿದ್ದರು. ಘಟನೆಯಲ್ಲಿ ಭಾರತದ ಆರು ಮಂದಿ ಯೋಧರು ಗಾಯಗೊಂಡಿದ್ದರು.