ನವದೆಹಲಿ, ಡಿ 19 (DaijiworldNews/DB): ಮುಖ್ಯಮಂತ್ರಿ ಸ್ಥಾನಕ್ಕಾಗಿ ಹಿಮಾಚಲ ಪ್ರದೇಶದಲ್ಲಿ ಮೂರ್ನಾಲ್ಕು ಮಂದಿ ಬೇಡಿಕೆಯಿಟ್ಟಿದ್ದಾರೆಯೇ ಹೊರತು ಯಾವುದೇ ಆಂತರಿಕ ಕಲಹ ರಾಜ್ಯ ಕಾಂಗ್ರೆಸ್ನಲ್ಲಿ ಇಲ್ಲ ಎಂದು ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಯಾವೊಬ್ಬ ಕಾಂಗ್ರೆಸ್ ಶಾಸಕನೂ ಬಿಜೆಪಿಗೆ ಹೋಗುವುದಿಲ್ಲ. ನಮ್ಮ ಸರ್ಕಾರದಲ್ಲಿ ಯಾವುದೇ ಆಂತರಿಕ ಕಲಹ ಇಲ್ಲ. ಜನರಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಲು ನಾವೆಲ್ಲಾ ಬದ್ದರಾಗಿದ್ದೇವೆ ಎಂದರು.
ಸಚಿವ ಸಂಪುಟ ವಿಸ್ತರಣೆ ಶೀಘ್ರ ಆಗಲಿದೆ. ಸಚಿವ ಸ್ಥಾನಕ್ಕಾಗಿ ಕೆಲವು ಶಾಸಕರು ಲಾಬಿ ನಡೆಸುತ್ತಿರುವ ಆರೋಪ ಸತ್ಯಕ್ಕೆ ದೂರವಾದುದು. ಆದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಮೂರ್ನಾಲ್ಕು ಮಂದಿ ಬೇಡಿಕೆಯಿಟ್ಟಿದ್ದು, ಈ ವಿಚಾರದಲ್ಲಿ ಸ್ವಲ್ಪ ಕಚ್ಚಾಟವಿದೆ ಎಂದು ತಿಳಿಸಿದರು.
ಸಂಘರ್ಷ ಇರುವುದು ಹುದ್ದೆಗಾಗಿಯೇ ಹೊರತು ಪಕ್ಷದಲ್ಲಿ ಆಂತರಿಕ ಕಲಹ ಅಲ್ಲ. ಬಿಜೆಪಿಯ ದುರಾಡಳಿತದ ವಿರುದ್ದ ಹಿಮಾಚಲ ಜನತೆ ಕಾಂಗ್ರೆಸ್ಗೆ ಮತ ಹಾಕಿದ್ದು, ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ತಾವು ಸಿದ್ದ ಎಂದು ವಿವರಿಸಿದರು.
ದೇಶದಲ್ಲಿ ನಿರುದ್ಯೋಗ, ಬೆಲೆ ಏರಿಕೆ ಸಹಿತ ಹಲವು ಸಮಸ್ಯೆಗಳಿವೆ. ಆದರೆ ರಾಹುಲ್ ಗಾಂಧಿಯವರ ಭಾಷಣ ಲೇವಡಿ ಮಾಡುವುದು ಸೇರಿದಂತೆ ಗಿಮಿಕ್ ರಾಜಕಾರಣದಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ. ಆ ಮೂಲಕ ತಮ್ಮ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯುವುದು ಆ ಪಕ್ಷದ ತಂತ್ರವಾಗಿದೆ ಎಂದು ಇದೇ ವೇಳೆ ಅವರು ಕಿಡಿ ಕಾರಿದರು.
ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಉತ್ತಮ ಜನ ಬೆಂಬಲ ವ್ಯಕ್ತವಾಗುತ್ತಿದೆ. ಧರ್ಮ, ಜಾತಿ ಹೆಸರಿನಲ್ಲಿ ದ್ವೇಷ ಬಿತ್ತುವುದನ್ನು ಹೋಗಲಾಡಿಸಿ ಜನರನ್ನು ಒಗ್ಗೂಡಿಸುವುದೇ ಈ ಪಾದಯಾತ್ರೆಯ ಉದ್ದೇಶ ಎಂದವರು ಪ್ರತಿಪಾದಿಸಿದರು.