ಬೆಂಗಳೂರು, ಡಿ 18 (DaijiworldNews/HR): ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ವ್ಯಾಪ್ತಿಯ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಆರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಸರಕಾರಕ್ಕೆ ಮನವಿ ಮಾಡಿದೆ.
ವಿಧಾನ ಸೌಧದಲ್ಲಿ ಶನಿವಾರ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಭೇಟಿ ಮಾಡಿದ ಒಕ್ಕೂಟದ ಅಧ್ಯಕ್ಷ ಕೆ.ಎಸ್. ದೀಕ್ಷಿತ್ ನೇತೃತ್ವದ ನಿಯೋಗ ಧಾರ್ಮಿಕ ಆಚರಣೆ ಮಧ್ಯೆ ಆಶ್ಲೀಲವಾದ ರಿಂಗ್ ಟ್ಯೂನ್ಗಳು ಕಿರಿಕಿರಿ ಉಂಟು ಮಾಡುತ್ತವೆ. ಧ್ಯಾನಸ್ತರಾಗಿರುವ ವೇಳೆ ಹೆಣ್ಣು ಮಕ್ಕಳ ಫೋಟೋ ತೆಗೆಯುವುದೂ ಕಂಡು ಬಂದು ಬಂದಿದೆ ಎಂದಿದ್ದಾರೆ.
ಇನ್ನು ದೇವರ ಫೋಟೋ ತೆಗೆಯುವುದು, ಗರ್ಭ ಗುಡಿಗೆ ಬೆನ್ನು ಹಾಕಿ ಫೋಟೋ ತೆಗೆಯಲಾಗುತ್ತಿದೆ. ಪೂಜೆ, ಹೋಮ ಹವನ ಮಾಡುವಾಗ ಮೊಬೈಲ್ ಬಳಸಿದಲ್ಲಿ ಏಕಾಗ್ರತೆ ತಪ್ಪುತ್ತದೆ. ಈ ಎಲ್ಲ ಕಾರಣಗಳಿಂದಾಗಿ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.