ಪಟ್ನಾ, ಡಿ 18( DaijiworldNews/MS): ಬಿಹಾರದ ಸಾರನ್ ಜಿಲ್ಲೆಯಲ್ಲಿ ವಿಷ ಮದ್ಯ ಸೇವನೆ ದುರಂತದಲ್ಲಿ ಸಾವಿನ ಸಂಖ್ಯೆ ಏರುತ್ತಲೇ ಇದ್ದು, ಮೃತರ ಸಂಖ್ಯೆ 70ಕ್ಕೆ ತಲುಪಿದೆ. ಇನ್ನೂ ಬಹಳಷ್ಟು ಮಂದಿ ತೀವ್ರವಾಗಿ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿರುವ ಕಾರಣ ಮೃತಪಟ್ಟವರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.
ಬಿಹಾರದಲ್ಲಿ 2016ರಲ್ಲಿ ಮದ್ಯ ಮಾರಾಟ ನಿಷೇಧದ ಬಳಿಕ ಸಂಭವಿಸಿರುವ ಬಹುದೊಡ್ಡ ಕಳ್ಳಭಟ್ಟಿ ದುರಂತ ಇದಾಗಿದ್ದು, ಮದ್ಯ ಮಾರಾಟ ನಿಷೇಧದ ಬಳಿಕ ಕಳ್ಳಭಟ್ಟಿ ಹಾವಳಿ ಹೆಚ್ಚಾಗಿದೆ. ಸಾರನ್ ಪಕ್ಕದಲ್ಲಿನ ಸಿವಾನ್, ಬೇಗುಸರಾಯ್ ಜಿಲ್ಲೆಗಳಲ್ಲಿಯೂ ಈಗ ಮದ್ಯ ಸೇವನೆಯಿಂದ ಸಾವು ಸಂಭವಿಸುತ್ತಿದೆ.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಈ ಸಾವುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ತನಿಖೆ ನಡೆಸಲು ಮುಂದಾಗಿದೆ. ವಿಷ ಮದ್ಯ ಸೇವಿಸಿ ಅಸ್ವಸ್ಥರಾದವರಿಗೆ ಸರಿಯಾದ ಚಿಕಿತ್ಸೆ ನೀಡಲಾಗುತ್ತಿದೆಯೇ ಇಲ್ಲವೇ ಎಂಬ ಬಗ್ಗೆ ತಿಳಿಯಲು ಅದು ಉದ್ದೇಶಿಸಿದೆ.