ವಿಜಯವಾಡ, ಡಿ 17 (DaijiworldNews/DB): 2034ಕ್ಕೆ ನನ್ನ ಸಾವು ಖಚಿತ. ಬನ್ನಿ ಸಂಭ್ರಮಿಸೋಣ ಎಂಬುದಾಗಿ ಆಂಧ್ರಪ್ರದೇಶದ ಮಾಜಿ ಸಚಿವರೊಬ್ಬರು ಆಹ್ವಾನ ಪತ್ರಿಕೆ ಮುದ್ರಿಸಿ ಹಂಚಿದ್ದಾರೆ! ಸಚಿವರ ಈ ವಿಚಿತ್ರ ವರ್ತನೆಗೆ ಜನ ದಂಗಾಗಿದ್ದಾರೆ.
ಆಂಧ್ರದಲ್ಲಿ ಟಿಡಿಪಿ ಸರ್ಕಾರ ಇದ್ದ ವೇಳೆ ಸಚಿವರಾಗಿದ್ದ ಪಲೇಟಿ ರಾಮರಾವ್ ಅವರೇ ಈ ರೀತಿ ಡೆತ್ ಡೇ ಆಚರಿಸಲು ಆಮಂತ್ರಣ ಪತ್ರಿಕೆ ಹಂಚಿದವರು. ಎರಡು ಬಾರಿ ಶಾಸಕರಾಗಿ ಬಳಿಕ ಸಚಿವರಾಗಿದ್ದ 63 ವರ್ಷದ ರಾಮರಾವ್ ಅವರು 2034ಕ್ಕೆ ನನ್ನ ಸಾವು ಖಚಿತ. ಸಾವನ್ನಪ್ಪಲು ಇನ್ನೂ12 ವರ್ಷ ಇರುವುದರಿಂದ ಹುಟ್ಟುಹಬ್ಬ ಆಚರಿಸಿದಂತೆ ಸಾವಿನ ದಿನವನ್ನೂ ಪ್ರತಿ ವರ್ಷ ಸಂಭ್ರಮಿಸಬೇಕು ಎಂಬುದಕ್ಕೆ ಈ ಆಹ್ವಾನ ನೀಡಿದ್ದೇನೆ ಎಂದು ಆಮಂತ್ರಣ ಪತ್ರಿಕೆಯಲ್ಲಿ ಹೇಳಿದ್ದಾರೆ.
ಆಹ್ವಾನ ಪತ್ರಿಕೆಯಲ್ಲೇನಿದೆ?
ಇದುವರೆಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದೇನೆ. ಆದರೆ ಅದಕ್ಕೆ ಅರ್ಥವಿಲ್ಲ. 2034ಕ್ಕೆ ನಾನು ಸಾಯಲಿದ್ದೇನೆ ಎಂದು ನಿರ್ಧರಿಸಿದ್ದೇನೆ. ಇನ್ನು ಮುಂದೆ ನಾನು ಡೆತ್ ಡೇ ಆಚರಿಸಿಕೊಳ್ಳುತ್ತೇನೆ. ನಿಮ್ಮೆಲ್ಲರನ್ನು ನಾನು ನನ್ನ ಸಾವಿನ ದಿನದ ಸಂಭ್ರಮಕ್ಕಾಗಿ ಆಹ್ವಾನಿಸುತ್ತೇನೆ. ಇನ್ನೂ12 ವರ್ಷ ಸಮಯವಿದ್ದು, ಅಲ್ಲಿವರೆಗೆ ಪ್ರತಿ ವರ್ಷ ಈ ಸಂಭ್ರಮ ನಡೆಯುತ್ತದೆ. ನೀವೆಲ್ಲರೂ ನನ್ನ ಡೆತ್ ಡೇ ಆಚರಣೆಗೆ ಬಂದು ನನ್ನನ್ನು ಆಶೀರ್ವದಿಸಬೇಕು ಎಂದು ಮುದ್ರಿಸಿ ಆಮಂತ್ರಣ ಪತ್ರ ಹಂಚಿದ್ದಾರೆ. ಸದ್ಯ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಾಜಿ ಸಚಿವರ ವಿಚಿತ್ರ ವರ್ತನೆಗೆ ಜನ ದಂಗಾಗಿದ್ದಾರೆ.
ದೇವರು ಮನುಷ್ಯನಿಗೆ ಎಷ್ಟೇ ಕಲಿಸಿದರೂ ಮಾನವ ಕಲಿತುಕೊಳ್ಳುತ್ತಿಲ್ಲ. ಹುಟ್ಟಿದ ಪ್ರತಿ ಜೀವಿಯೂ ಒಂದಲ್ಲ ಒಂದು ದಿನ ಸಾಯಬೇಕೆಂದು ಭಗವಂತ ಹೇಳಿದ್ದಾನೆ. ಯಾರಿಗೂ ಕೆಟ್ಟದ್ದನ್ನು ಬಯಸಬಾರದು, ಪರೋಪಕಾರಿಯಾಗಿರಬೇಕು ಎಂಬುದೇ ದೇವರು ಹೇಳಿರುವುದು. ಮನುಷ್ಯ ತನ್ನ ಜೀವಿತಾವಧಿ ಮತ್ತು ಮರಣದ ದಿನಾಂಕ ನಿರ್ಧರಿಸಲು ಬಯಸುತ್ತಾನೆ. ತನ್ನ ಜೀವಿತಾವಧಿ ಅರಿವಾದ ನಂತರ ಜೀವಿಯ ಹಂತದಿಂದ ಮಾನವನಾಗಲು ಮನುಷ್ಯ ಬಯಸುತ್ತಾನೆ. ಈ ಸಿದ್ದಾಂತ ಕಾರ್ಯಗತಗೊಳಿಸುವ ಮೊದಲ ಪ್ರಯತ್ನವಾಗಿ ನಾನು ಎಷ್ಟು ದಿನ ಬದುಕಬೇಕೆಂದು ಯೋಚಿಸಿ, 2034ಕ್ಕೆ ಬದುಕು ಸಾಕು ಮಾಡುವ ಬಗ್ಗೆ ನಿರ್ಧರಿಸಿದ್ದೇನೆ ಎಂದೂ ಆಮಂತ್ರಣ ಪತ್ರಿಕೆಯಲ್ಲಿ ಬರೆದುಕೊಂಡಿದ್ದಾರೆ.