ಡೆಹ್ರಾಡೂನ್, ಡಿ 17 (DaijiworldNews/DB): ಕೋವಿಡ್ನಿಂದಾಗಿ ತಾಯಿ ಮೃತಪಟ್ಟ ಬಳಿಕ ಭಿಕ್ಷಾಟನೆಗಿಳಿದ ಬಾಲಕನೊಬ್ಬ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಕೋಟಿಯ ಒಡೆಯನಾಗಿದ್ದಾನೆ. ಸ್ಲಂ ಡಾಗ್ ಮಿಲಿಯನೇರ್ ಚಿತ್ರವನ್ನು ನೆನಪಿಸುವ ಈ ನೈಜ ಘಟನೆ ನಡೆದಿರುವುದು ಉತ್ತರಾಖಂಡದಲ್ಲಿ.
ಷಾಜೆಬ್ ಎಂಬಾತನೇ ಕೋಟಿಯ ಒಡೆಯನಾದ ಬಾಲಕ. ಆದರೆ ಕೋಟ್ಯಾಧಿಪತಿಯಾದ ಬಾಲಕನ ಕತೆಯ ಹಿಂದೆ ದೊಡ್ಡ ವ್ಯಥೆಯೊಂದಿದೆ. 2019ರಲ್ಲಿ ಬಾಲಕನ ತಂದೆಯ ಅಕಾಲಿಕ ಮರಣಾನಂತರ ತಾಯಿ ಇಮ್ರಾನ ಕೌಟುಂಬಿಕ ಕಲಹದಿಂದ ಅತ್ತೆ ಮಾವನ ಜೊತೆ ಇರದೆ ಉತ್ತರಪ್ರದೇಶದ ಸಾಹರನ್ಪುರದ ಪಂಡೋಲಿ ಜಿಲ್ಲೆಯಲ್ಲಿರುವ ತನ್ನ ತವರು ಮನೆಗೆ ಬಂದು ಅಲ್ಲೇ ವಾಸವಾಗಿದ್ದರು. ಆದರೆ ಬಾಲಕನ ಬಾಳಿನಲ್ಲಿ ಮತ್ತೆ ವಿಧಿಯಾಟವಾಡಿತ್ತು. ಕೋವಿಡ್ನಿಂದಾಗಿ ಆತ ತಾಯಿಯನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬೀಳುತ್ತಾನೆ. ಹೊಟ್ಟೆಪಾಡಿಗಾಗಿ ಭಿಕ್ಷಾಟನೆಗೆ ಇಳಿಯುವುದು ಆತನಿಗೆ ಅನಿವಾರ್ಯವಾಗಿತ್ತು. ಉತ್ತರಾಖಂಡದ ಕಾಲಿಯಾರ್ನ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಾ ಅಲೆದಾಡುತ್ತಿದ್ದ ಬಾಲಕನ ಅದೃಷ್ಟ ಬದಲಾಯಿಸಿದ್ದು ಮೊಬಿನ್ ಎಂಬ ಆತನ ತಾಯಿಯ ದೂರದ ಸಂಬಂಧಿ ಯುವಕ.
ಈ ನಡುವೆ ಆತನ ಅಜ್ಜನ ಕುಟುಂಬವು ಷಾಜೆದ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ ಹುಡುಕಿಕೊಟ್ಟವರಿಗೆ ಬಹುಮಾನವನ್ನೂ ಘೋಷಿಸಿತ್ತು.
ಆಸ್ತಿ ಬರೆದಿದ್ದರು ಅಜ್ಜ!
ಬಾಲಕನ ಅಜ್ಜ ಮೊಹಮ್ಮದ್ ಯಾಕೂಬ್ ಸಾಯುವುದಕ್ಕೂ ಮೊದಲು ತಮ್ಮ ಆಸ್ತಿಯಲ್ಲಿನ ಅರ್ಧ ಭಾಗವನ್ನು ಬಾಲಕ ಷಾಜೆಬ್ ಹೆಸರಿಗೆ ವಿಲ್ ಬರೆದಿದ್ದರು. ಹೀಗಾಗಿ ಬಾಲಕ ಷಾಜೆಬ್ಗಾಗಿ ಅಜ್ಜನ ಮನೆಯವರು ಹುಡುಕಾಟ ನಡೆಸಿದ್ದಾರೆ. ಕಾಲಿಯಾರ್ನ ಬೀದಿಯಲ್ಲಿ ಭಿಕ್ಷೆ ಬೇಡುತ್ತಿದ್ದ ಷಾಜೆಬ್ನನ್ನು ತಾಯಿಯ ದೂರದ ಸಂಬಂಧಿ ಮೊಬಿನ್ ಗುರುತಿಸಿ ಆತನನ್ನು ವಿಚಾರಿಸುತ್ತಾನೆ. ಆತನ ಹೆಸರು, ತಾಯಿ ಹೆಸರು, ವಿಳಾಸ ಕೇಳಿ ಆತ ಇಮ್ರಾನಳ ಪುತ್ರ ಎಂಬುದು ಖಚಿತಗೊಂಡ ಬಳಿಕ ಬಾಲಕನ ಅಜ್ಜನ ಕುಟುಂಬಕ್ಕೆ ವಿಷಯ ತಿಳಿಸಿದ್ದಾನೆ. ಕೂಡಲೇ ಕುಟುಂಬದವರು ಆಗಮಿಸಿ ಗುರುವಾರ ಆತನನ್ನು ತಾಯಿಯ ಹುಟ್ಟೂರಾದ ಉತ್ತರಪ್ರದೇಶದ ಸಾಹರನ್ಪುರಕ್ಕೆ ಕರೆದುಕೊಂಡು ಹೋಗಿ ಪಿತ್ರಾರ್ಜಿತ ಆಸ್ತಿಯಾಗಿ ಬಂದ ಮನೆ ಹಾಗೂ ಒಂದು ಎಕರೆ ಭೂಮಿಯನ್ನು ಷಾಜೆಬ್ಗೆ ನೀಡಿದ್ದಾರೆ. ಭಿಕ್ಷಾಟನೆಗಿಳಿದ ಬಾಲಕ ಇದೀಗ ಕೋಟಿ ಬೆಲೆ ಬಾಳುವ ಆಸ್ತಿಯ ಒಡೆಯನಾಗಿದ್ದಾನೆ.