ಅಮೃತ್ಸರ್, ಡಿ 17 (DaijiworldNews/DB): ಪಂಜಾಬ್ನ ಪೊಲೀಸ್ ಠಾಣೆಯೊಂದರ ಮೇಲೆ ಇತ್ತೀಚೆಗೆ ಗ್ರೆನೇಡ್ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಶುಕ್ರವಾರ ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.
ತರಣ್ ತಾರಣ್ ಜಿಲ್ಲೆಯ ಅಮೃತ್ಸರ್-ಭಟಿಂಡಾ ಹೆದ್ದಾರಿಯಲ್ಲಿರುವ ಪೊಲೀಸ್ ಠಾಣೆ ಮೇಲೆ ಡಿಸೆಂಬರ್ 9ರ ತಡರಾತ್ರಿ ರಾಕೆಟ್ ಚಾಲಿತ ಗ್ರೆನೇಡ್ ದಾಳಿ ನಡೆದಿತ್ತು. ಈ ದಾಳಿಗೆ ಸಂಬಂಧಿಸಿ ಇದೀಗ ಆರು ಮಂದಿಯ ಬಂಧನವಾಗಿದ್ದು, ಈ ಪೈಕಿ ಇಬ್ಬರು ಅಪ್ರಾಪ್ತರೂ ಸೇರಿದ್ದಾರೆ.
ಗ್ರೆನೇಡ್ ದಾಳಿಯ ಬಗ್ಗೆ ಯೂಟ್ಯೂಬ್ನಲ್ಲಿ ನೋಡಿ ಆರೋಪಿಗಳು ದಾಳಿ ಮಾಡುವುದು ಹೇಗೆಂಬ ಬಗ್ಗೆ ತಿಳಿದುಕೊಂಡಿದ್ದರು. ಯೂಟ್ಯೂಬ್ನಲ್ಲಿ ತೋರಿಸಿದಂತೆಯೇ ದಾಳಿ ಮಾಡಲಾಗಿತ್ತು. ಯೂಟ್ಯೂಬ್ನಲ್ಲಿ ವೀಡಿಯೋ ಅಪ್ಲೋಡ್ ಮಾಡಿರುವುದು ಒಬ್ಬ ವಿದೇಶಿಗ ಎಂದು ತಿಳಿದು ಬಂದಿದೆ.
ಏಕ ಬಳಕೆಯ 70 ಎಂಎಂ ಸಾಮರ್ಥ್ಯದ ಆರ್ಪಿಜಿ-26ನ್ನು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಗ್ರೆನೇಡ್ನಲ್ಲಿ ದುಷ್ಕರ್ಮಿಗಳು ಬಳಸಿದ್ದಾರೆ. ಸೋವಿಯತ್ ಕಾಲದ ಗ್ರೆನೇಡ್ ಇದಾಗಿದ್ದು, ಗಡಿಯಾಚೆಯಿಂದಲೇ ಆರೋಪಿಗಳು ಇದನ್ನು ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕೆನಡಾ ಮೂಲದ ಗ್ಯಾಂಗ್ಸ್ಟರ್ ಲಖ್ಬೀರ್ ಸಿಂಗ್ ಲಂಡಾ ಮತ್ತು ಆತನ ಸಹಚರರಾದ ಯೂರೋಪ್ನಲ್ಲಿರುವ ಸತ್ಬೀರ್ ಸಿಂಗ್ ಸತ್ತಾ ಹಾಗೂ ಗುರುದೇವ್ ಸಿಂಗ್ ಜಾಸ್ಸಲ್ ದಾಳಿಯ ಹಿಂದಿನ ಮಾಸ್ಟರ್ಮೈಂಡ್ಗಳಾಗಿದ್ದಾರೆ. ಇವರಿಗೆ ಪಂಜಾಬ್ನಲ್ಲಿರುವ ಅಜ್ಮೀತ್ ಸಿಂಗ್ ಎಂಬಾತ ಸಹಾಯ ಮಾಡಿದ್ದಾನೆ. ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐ ಯು ದುಷ್ಕರ್ಮಿಗಳ ಒಟ್ಟು ಕಾರ್ಯತಂತ್ರಕ್ಕೆ ಸಹಕರಿಸಿದೆ ಎಂದು ಡಿಜಿಪಿ ಗೌರವ್ ಯಾದವ್ ತಿಳಿಸಿದ್ದಾರೆ.