ಮೈಸೂರು, ಡಿ 17 ( DaijiworldNews/MS): ಮೈಸೂರು ದಸರಾದಲ್ಲಿ 14 ಬಾರಿ ಚಿನ್ನದ ಅಂಬಾರಿ ಹೊತ್ತಿರುವ ಹೆಗ್ಗಳಿಕೆಗೆ ಪಾತ್ರವಾಗಿರುವ ಬಲರಾಮ ಆನೆಗೆ ಗುಂಡು ಹಾರಿಸಿದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಗುರುವಾರ ರಾತ್ರಿ ಪಿರಿಯಾಪಟ್ಟಣ ತಾಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವ ಜಮೀನಿಗೆ ಬಲರಾಮ ಹೋಗಿದ್ದು, ಆನೆಯನ್ನು ಕಾಡಾನೆ ಎಂದು ತಪ್ಪು ತಿಳಿದು ಗುಂಡು ಸಿಟ್ಟಿಗೆದ್ದ ಜಮೀನು ಮಾಲೀಕ ಗುಂಡುಹಾರಿಸಿದ್ದಾನೆ.
ಗುಂಡುಹಾರಿಸಿದ ಆರೋಪಿ ಸುರೇಶ್ ಎನ್ನುವಾತನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ
ಆನೆಯ ತೊಡೆ ಕಾಲು ಸೇರಿದಂತೆ ಅರ್ಧ ಭಾಗದಲ್ಲಿ ಗುಂಟೇಟು ಬಿದ್ದಿರುವ ಗಾಯಗಳು ಪತ್ತೆಯಾಗಿದೆ. ಅಲ್ಲದೇ ಆತನ ಬಳಿ ಇದ್ದ ಒಂಟಿ ನಳಿಕೆಯ ಕೋವಿ ಹಾಗೂ ಕಾಡತೂಸುಗಳನ್ನು ಸಹ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಡಿಸೆಂಬರ್ 30ರ ವರೆಗೆ ಕಸ್ಟಡಿ ಪಡೆಯಲಾಗಿದೆ.
ಸದ್ಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ರಮೇಶ್ ಬಲರಾಮನಿಗೆ ಚಿಕಿತ್ಸೆ ನೀಡಿದ್ದು, ಆನೆ ಚೇತರಿಸಿಕೊಳ್ಳುತ್ತಿದೆ.