ನವದೆಹಲಿ, ಡಿ 16 (DaijiworldNews/DB): ದೆಹಲಿಯ ನಿರ್ಭಯಾ ಪ್ರಕರಣಕ್ಕೆ ಹತ್ತು ವರ್ಷ ಸಂದ ಹಿನ್ನೆಲೆಯಲ್ಲಿ ಮಹಿಳಾ ಸುರಕ್ಷತೆ ವಿಚಾರವಾಗಿ ಚರ್ಚಿಸಲು ಸಂಸತ್ನ ಒಂದು ದಿನದ ಅಧಿವೇಶನವನ್ನು ಮೀಸಲಿಡಬೇಕು ಎಂದು ಕೋರಿ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್ ಅವರು ಲೋಕಸಭೆ ಸ್ಪೀಕರ್ ಹಾಗೂ ರಾಜ್ಯಸಭೆ ಸಭಾಪತಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.
ಮಹಿಳಾ ದೌರ್ಜನ್ಯ ಸಾಂಕ್ರಾಮಿಕ ಎಂಬ ಸ್ಥಿತಿಗೆ ತಲುಪಿರುವುದು ದುರದೃಷ್ಟಕರ. ಪ್ರತಿ ದಿನ ಆರು ಅತ್ಯಾಚಾರ ಘಟನೆ ನಡೆಯುತ್ತಿರುವುದು ಹೇಯವಾಗಿದೆ ಎಂದವರು ಇದೇ ವೇಳೆ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ನಿರ್ಭಯಾ ನಿಧಿಯಲ್ಲಿಯೂ ಕಡಿತ ಮಾಡಲಾಗಿದೆ. ಸರ್ಕಾರವು ಮಹಿಳಾ ದೌರ್ಜನ್ಯ ತಡೆಯುವಲ್ಲಿ ಸಂಪೂರ್ಣ ವಿಫಲತೆ ಕಂಡಿದೆ. ಸಂಸತ್ ಅಧಿವೇಶನದಲ್ಲಿ ಮಹಿಳಾ ಸುರಕ್ಷತಾ ವಿಷಯವಾಗಿ ಚರ್ಚೆಯಾಗಬೇಕಾದ ಅಗತ್ಯತೆ ತುಂಬಾ ಇದೆ. ಹೀಗಾಗಿ ಒಂದು ದಿನದ ಅಧಿವೇಶನವನ್ನು ಈ ವಿಚಾರಕ್ಕಾಗಿ ಮೀಸಲಿಡಬೇಕೆಂದು ಅವರು ಮನವಿ ಸಲ್ಲಿಸಿದ್ದಾರೆ.