ದೌಸಾ, ಡಿ 16 (DaijiworldNews/DB): ರಾಜಸ್ಥಾನದಲ್ಲಿ ಪಕ್ಷ ಒಗ್ಗಟ್ಟಾಗಿದ್ದು, ಎಲ್ಲಾ ಬಿಕ್ಕಟ್ಟು ಸುಸೂತ್ರವಾಗಿ ಪರಿಹಾರವಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ನಡುವೆ ಅಧಿಕಾರಕ್ಕಾಗಿ ನಡೆಯುವ ಗುದ್ದಾಟದ ಬಗ್ಗೆ ಸುದ್ದಿಸಂಸ್ಥೆಯೊಂದರ ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಕ್ಕಟ್ಟು ಸುಸೂತ್ರವಾಗಿ ಶಮನಗೊಳ್ಳಲಿದೆ. ಮುಂಬರುವ ವರ್ಷ ನಡೆಯುವ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ನಾವು ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವುದು ನಿಶ್ಚಿತ ಎಂದರು.
ರಾಜಸ್ಥಾನದಲ್ಲಿ ಪಕ್ಷದ ಎಲ್ಲಾ ನಾಯಕರು ಒಗ್ಗಟ್ಟಾಗಿದ್ದಾರೆ. ಸಂಘಟನಾತ್ಮಕ ನೆಲೆಗಟ್ಟಿನಲ್ಲಿ ಪಕ್ಷ ಜನರ ಬಳಿ ಹೋಗಲಿದೆ ಎಂದವರು ಪ್ರತಿಪಾದಿಸಿದರು.
ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯು ರಾಜಸ್ಥಾನಕ್ಕೆ ಪ್ರವೇಶಿಸುವುದಕ್ಕೆ ಕೆಲವು ಸಮಯದ ಮೊದಲು ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವೆ ಭಿನ್ನಮತ ಸ್ಪೋಟಗೊಂಡಿದ್ದು, ಬಳಿಕ ಕೆ.ಸಿ. ವೇಣುಗೋಪಾಲ್ ಮಧ್ಯಪ್ರವೇಶದಿಂದ ಇಬ್ಬರ ನಡುವಿನ ಮುಸುಕಿನ ಗುದ್ದಾಟ ಸ್ವಲ್ಪ ಕಡಿಮೆಯಾಗಿತ್ತು. ಆ ಬಳಿಕ ಇಬ್ಬರೂ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿ ಒಗ್ಗಟ್ಟು ಪ್ರದರ್ಶನ ಮಾಡಿದ್ದರು.