ಕೋಲ್ಕತ್ತಾ, ಡಿ 16 (DaijiworldNews/DB): ಎಲ್ಎಸಿಯಲ್ಲಿ ಪರಿಸ್ಥಿತಿ ಭಾರತದ ನಿಯಂತ್ರಣದಲ್ಲಿದೆ ಎಂದು ಈಸ್ಟರ್ನ್ ಕಮಾಂಡ್ ಚೀಫ್ ಲೆಫ್ಟಿನೆಂಟ್ ಜನರಲ್ ಆರ್ಪಿ ಕಲಿತಾ ಹೇಳಿದ್ದಾರೆ.
ಕೋಲ್ಕತ್ತಾದಲ್ಲಿ ವಿಜಯ್ ದಿವಸ್ನ 51ನೇ ವಾರ್ಷಿಕೋತ್ಸವದ ಬಳಿಕ ತವಾಂಗ್ನಲ್ಲಿ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆಯ ಬಗ್ಗೆ ಇದೇ ಮೊದಲ ಬಾರಿಗೆ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚೀನಾ ಸೈನಿಕರು ಪಿಎಲ್ಎ ಎಲ್ಎಸಿ ದಾಟಿರುವುದರಿಂದ ಘರ್ಷಣೆ ಉಂಟಾಗಿದ್ದು, ಎರಡೂ ಕಡೆಯ ಸೈನಿಕರಿಗೆ ಗಾಯಗಳಾಗಿವೆ. ಈ ಸಮಸ್ಯೆಯನ್ನು ಸ್ಥಳೀಯ ಮಟ್ಟದಲ್ಲಿ ಪರಿಹರಿಸಿರುವುದಲ್ಲದೆ ಬುಮ್ಲಾದಲ್ಲಿ ಧ್ವಜ ಸಭೆ ನಡೆದಿದೆ. ಸದ್ಯ ಎಲ್ಎಸಿಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದ್ದಾರೆ.
ನಮ್ಮ ದೇಶದ ರಕ್ಷಣೆಗೆ ನಾವೆಂದೂ ಬದ್ದ. ಶಾಂತಿ, ಘರ್ಷಣೆ ಅಥವಾ ಬಾಹ್ಯ, ಆಂತರಿಕ ಬೆದರಿಕೆಗಳ ವಿರುದ್ದ ನಾವು ಒಂದಾಗಿದ್ದೇವೆ. ಪ್ರಾದೇಶಿಕ ಸಮಗ್ರತೆ ನಮ್ಮ ಆದ್ಯತೆ. ಎಲ್ಲಾ ಸಂದರ್ಭಗಳನ್ನು ಎದುರಿಸಲೂ ಭಾರತೀಯ ಸೇನೆ ಸಿದ್ದವಾಗಿದೆ ಎಂದವರು ತಿಳಿಸಿದರು.
ಗಡಿಯಾಚೆಗಿನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ವಿವಾದಿತವಾಗಿ ಗುರುತಿಸಲ್ಪಟ್ಟ ಪ್ರದೇಶಗಳಲ್ಲಿ ಎರಡು ವಿಭಿನ್ನವಾದ ಗ್ರಹಿಕೆಗಳಿವೆ. ಆ ಪೈಕಿ ಒಂದು ಪ್ರದೇಶದಲ್ಲಿ ಪಿಎಲ್ಎ ಗಸ್ತು ಉಲ್ಲಂಘನೆಯಾಗಿರುವುದನ್ನು ಗಮನಿಸಿ ಕೂಡಲೇ ನಮ್ಮ ಪಡೆ ಅವುಗಳನ್ನು ತಡೆಯುವಲ್ಲಿ ಸಫಲವಾಗಿದೆ ಎಂದರು.
ಈ ವಿಚಾರವಾಗಿ ಹಬ್ಬುವ ವದಂತಿಗಳಿಗೆ ಯಾರೂ ಕಿವಿಗೊಡಬಾರದು. ಉತ್ತರದ ಗಡಿಯಲ್ಲಿರುವ ಗಡಿ ಪ್ರದೇಶಗಳು ನಮ್ಮ ನಿಯಂತ್ರಣದಲ್ಲಿದೆ ಎಂದವರು ಇದೇ ವೇಳೆ ಭರವಸೆ ನೀಡಿದರು.