ಪಾಟ್ನಾ, ಡಿ 16 (DaijiworldNews/DB): ಕಳ್ಳಬಟ್ಟಿ ಸೇವನೆಯಿಂದ ಯಾರೇ ಮೃತಪಟ್ಟರೂ ಅವರ ಕುಟುಂಬಕ್ಕೆ ಸರ್ಕಾರದಿಂದ ಯಾವುದೇ ಪರಿಹಾರ ನೀಡುವುದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಮಹತ್ವದ ಘೋಷಣೆ ಮಾಡಿದ್ದಾರೆ.
ಕಳ್ಳಬಟ್ಟಿ ಸೇವಿಸಿ ಸರನ್ ಜಿಲ್ಲೆಯಲ್ಲಿ 60 ಹಾಗೂ ಸಿವಾನ್ ಜಿಲ್ಲೆಯಲ್ಲಿ ನಾಲ್ವರು ಸಾವನ್ನಪ್ಪಿದ ಪ್ರಕರಣ ಸಂಬಂಧಿಸಿ ಬಿಹಾರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಸಿಎಂ ನಿತೀಶ್ಕುಮಾರ್ ಈ ಮಹತ್ವದ ಘೋಷಣೆ ಹೊರಡಿಸಿದ್ದಾರೆ.
ರಾಜ್ಯದಲ್ಲಿ ಸಾರಾಯಿ ನಿಷೇಧಗೊಳಿಸಲಾಗಿದ್ದರೂ, ಕಳ್ಳಬಟ್ಟಿ ಸೇವನೆ ಮಾಡುವವರು ಮೃತಪಟ್ಟರೆ ಅವರ ಕುಟುಂಬಕ್ಕೆ ಯಾವುದೇ ಪರಿಹಾರವನ್ನು ಸರ್ಕಾರ ನೀಡುವುದಿಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ಸರ್ಕಾರ ಸಾರಾಯಿ ನಿಷೇಧ ಮಾಡಿದೆ. ಹಾಗಿದ್ದಾಗ್ಯೂ ಅಡ್ಡ ಮಾರ್ಗ ಹಿಡಿದವರ ಮೇಲೆ ಸರ್ಕಾರ ಕಾಳಜಿ ವಹಿಸುವುದಿಲ್ಲ ಎಂದವರು ತಿಳಿಸಿದ್ದಾರೆ.
ಕಳ್ಳಬಟ್ಟಿ ಸೇವನೆಯಿಂದ ಸಾವು ಕಟ್ಟಿಟ್ಟಬುತ್ತಿ ಎಂಬುದನ್ನು ಪದೇಪದೇ ಜಾಗೃತಿ ಮೂಡಿಸಿ ಅರಿಕೆ ಮಾಡಲಾಗುತ್ತಿದೆ. ಆದರೂ ಅದನ್ನು ತಯಾರಿಸುವುದು, ಮಾರುವುದು, ಕುಡಿಯುವುದು ಮುಂದುವರಿಯುತ್ತಿರುವುದು ದುರದೃಷ್ಟಕರ. ಕುಡಿಯುವವರ ವಿಚಾರದಲ್ಲಿ ಸರ್ಕಾರ ಯಾವುದೇ ಮಾನವೀಯತೆ ತೋರುವುದಿಲ್ಲ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದರು.