ಮುಂಬೈ, ಡಿ 16 (DaijiworldNews/DB): ಶಿವಸೇನೆ ನಾಯಕ ಸಂಜಯ್ ರಾವುತ್ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕರೆ ಮಾಡಿ ಆರೋಗ್ಯ ವಿಚಾರಿಸಿರುವುದನ್ನು ರಾಜಕೀಯ ಕಹಿ ಸಮಯದಲ್ಲಿ ಅಪರೂಪದ ನಡವಳಿಕೆ ಎಂದು ಸಂಜಯ್ ರಾವುತ್ ಬಣ್ಣಿಸಿದ್ದಾರೆ.
ಉದ್ದವ್ ಠಾಕ್ರೆ ಬಣದ ಸಂಜಯ್ ರಾವುತ್ ಅವರಿಗೆ ರಾಹುಲ್ ಗಾಂಧಿಯವರು ಸೋಮವಾರ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ರಾವುತ್, ರಾಹುಲ್ ಗಾಂಧಿಯವರ ನೇತೃತ್ವದ ಭಾರತ್ ಜೋಡೋ ಯಾತ್ರೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವುದಕ್ಕೆ ಕಾರಣ ಅವರಲ್ಲಿರುವ ಪ್ರೀತಿ ಮತ್ತು ಸಹಾನುಭೂತಿ. ಈ ವಿಚಾರದಲ್ಲಿ ಅವರು ಗಮನ ಕೇಂದ್ರೀಕರಿಸಿರುವುದರಿಂದಲೇ ಜನ ಅವರನ್ನು ಪ್ರೀತಿಸುತ್ತಿದ್ದಾರೆ. ನನಗೆ ಕರೆ ಮಾಡಿ ಆರೋಗ್ಯ ವಿಚಾರಿಸುವ ಮೂಲಕ ಅವರು ರಾಜಕೀಯ ಕಹಿ ಸಮಯದಲ್ಲಿ ಅಪರೂಪದ ನಡವಳಿಕೆ ವ್ಯಕ್ತಪಡಿಸಿದ್ದಾರೆ ಎಂದರು.
ಈ ಹಿಂದೆ ಮಹಾರಾಷ್ಟ್ರದಲ್ಲಿ ರಾಹುಲ್ ಗಾಂಧಿಯವರು ಸ್ವಾತಂತ್ರ್ಯ ಹೋರಾಟಗಾರ ವಿಡಿ ಸಾವರ್ಕರ್ ಅವರ ವಿರುದ್ದ ನೀಡಿದ್ದ ಹೇಳಿಕೆಗೆ ಸಂಜಯ್ ರಾವುತ್ ಆಕ್ರೋಶ ವ್ಯಕ್ತಪಡಿಸಿದ್ದರು.