ನವದೆಹಲಿ, ಡಿ 16 (DaijiworldNews/DB): ಗಾಂಬಿಯಾ ದೇಶದಲ್ಲಿ ಸಂಭವಿಸಿದ ಪುಟಾಣಿ ಮಕ್ಕಳ ಸಾವಿಗೆ ಭಾರತದ ಖಾಸಗಿ ಔಷಧ ಕಂಪೆನಿ ನೀಡಿದ ಸಿರಪ್ ಕಾರಣವಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸಿರಪ್ ಮಾದರಿಗಳಲ್ಲಿ ಯಾವುದೇ ಅಪಾಯಕಾರಿ ಅಂಶ ಇರಲಿಲ್ಲ ಎಂಬುದು ಪ್ರಯೋಗಾಲಯ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಕೇಂದ್ರ ಹೇಳಿದೆ.
ಗಾಂಬಿಯಾದಲ್ಲಿ ಈ ವರ್ಷ 69 ಮಕ್ಕಳು ಸಾವನ್ನಪ್ಪಿರುವುದಕ್ಕೆ ಹರ್ಯಾಣದ ಸೋನೆಪತ್ನಲ್ಲಿರುವ ಮೈದೆನ್ ಫಾರ್ಮಾಸಿಟಿಕಲ್ಸ್ ಕಂಪೆನಿ ತಯಾರಿಸುತ್ತಿರುವ ಕೆಮ್ಮು ಹಾಗೂ ಶೀತದ ಸಿರಪ್ ಕಾರಣ ಇರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಅನುಮಾನಿಸಿತ್ತು. ಈ ಹಿನ್ನೆಲೆಯಲ್ಲಿ ಕಂಪೆನಿಯ ಮುಖ್ಯ ಕಾರ್ಖಾನೆಯನ್ನೇ ಬಂದ್ ಮಾಡಲಾಗಿತ್ತು. ಬಳಿಕ ಈ ಸಿರಪ್ಗಳ ಮಾದರಿಯನ್ನು ಲ್ಯಾಬೋರೇಟರಿ ಪರೀಕ್ಷೆಗಾಗಿ ನೀಡಲಾಗಿತ್ತು. ಪರೀಕ್ಷೆಯಲ್ಲಿ ಮಕ್ಕಳ ಸಾವಿಗೆ ಕಾರಣವಾಗುವಂತ ಯಾವುದೇ ಅಂಶ ಸಿರಪ್ಗಳಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ಭಾರತದ ಖಾಸಗಿ ಕಂಪೆನಿಗೂ ಗಾಂಬಿಯಾದಲ್ಲಿ ಮಕ್ಕಳು ಸಾವನ್ನಪ್ಪಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ತಿಳಿಸಿದೆ.
ಡ್ರಗ್ಸ್ ಕಂಟ್ರೋಲರ್ ಜನರಲ್ ವಿಜಿ ಸೊಮಾನಿ ಅವರು ಈ ಸಂಬಂಧ ವಿಶ್ವ ಆರೋಗ್ಯ ಸಂಸ್ಥೆಗೆ ಡಿಸೆಂಬರ್ 13ರಂದು ಪತ್ರ ಬರೆದಿದ್ದು, ಯಾವುದೇ ಎಥ್ಲೀನ್ ಗೈಕಾಲ್ ಅಥವಾ ಡಯಥ್ಲೀನ್ ಗ್ಲೈಕಾಲ್ ಈ ಸಿರಪ್ನಲ್ಲಿ ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಭಾರತದ ಔಷಧ ನಿಯಂತ್ರಣ ಹಾಗೂ ನ್ಯಾಯಾಂಗ ಪ್ರಕ್ರಿಯೆಗಳ ಮೇಲೆ ನನಗೆ ನಂಬಿಕೆಯಿದೆ. ಫ್ಯಾಕ್ಟರಿಯ ಮರು ಆರಂಭಕ್ಕೆ ಅನುಮತಿಗಾಗಿ ಮನವಿ ಸಲ್ಲಿಸಲಾಗುವುದು ಎಂದು ಮೈದೆನ್ ವ್ಯವಸ್ಥಾಪಕ ನಿರ್ದೇಶಕ ನರೇಶ್ ಕುಮಾರ್ ಗೋಯಲ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ವಿಷಕಾರಿ ಹಾಗೂ ಕಿಡ್ನಿಗೆ ಹಾನಿ ಉಂಟು ಮಾಡುವಷ್ಟು ಪ್ರಮಾಣದಲ್ಲಿ ಎಥ್ಲೀನ್ ಗೈಕಾಲ್ ಅಥವಾ ಡಯಥ್ಲೀನ್ ಗ್ಲೈಕಾಲ್ ಇದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಅಕ್ಟೋಬರ್ನಲ್ಲಿ ಅನುಮಾನ ವ್ಯಕ್ತಪಡಿಸಿತ್ತು.